ಬೆಳ್ತಂಗಡಿ: ಇತ್ತೀಚೆಗೆ ಭಜರಂಗದಳದ ಮುಖಂಡ ಕೃಷ್ಣ ಯಾನೆ ಕಿಟ್ಟ ಎಂಬವರಿಂದ ಹತ್ಯೆಯಾಗಿದ್ದಾರೆ ಎನ್ನಲಾದ ಕನ್ಯಾಡಿ ದಿನೇಶ್ರವರ ಮನೆಗೆ ಮಾಜಿ ಸಿ.ಎಂ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ಮಾ.19ರಂದು ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಾ.16ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯರವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೃತ ದಿನೇಶ್ನ ತಾಯಿ ಪದ್ಮಾವತಿಯವರನ್ನು ನಾನು ಭೇಟಿ ಮಾಡಿಸಿ ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿದ್ದೆ. ಅದರಂತೆ ಜಿಲ್ಲಾಧಿಕಾರಿಗಳು ಮೃತರ ಕುಟುಂಬಕ್ಕೆ ಪ್ರಥಮ ಹಂತದಲ್ಲಿ ರೂ.4.15ಲಕ್ಷ ಮಂಜೂರುಗೊಳಿಸಿದ್ದಾರೆ. ಇನ್ನೂ ರೂ.4.10 ಲಕ್ಷ ಶೀಘ್ರದಲ್ಲೆ ಬಿಡುಗಡೆಗೊಳ್ಳಲಿದೆ. ಅಲ್ಲದೇ ದಿನೇಶ್ರವರ ಪತ್ನಿಗೆ ಸರ್ಕಾರಿ ಉದ್ಯೋಗ ಕೂಡ ದೊರೆಯಬೇಕು ಎಂದರು.
ಇತ್ತೀಚೆಗೆ ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಪತ್ರಿಕಾಗೋಷ್ಠಿಯಲ್ಲಿ ಆಣೆ ಪ್ರಮಾಣಕ್ಕೆ ಕರೆದು ಸವಾಲು ಹಾಕಿದ ವಿಷಯವನ್ನು ಪ್ರಸ್ತಾಪಿಸಿದ ಬಂಗೇರರು ಭಾಸ್ಕರ್ನಂತಹ ನಾಲಾಯಕ್ ವ್ಯಕ್ತಿಗೆ ನನ್ನನ್ನು ಆಣೆಪ್ರಮಾಣಕ್ಕೆ ಕರೆಯುವ ಯೋಗ್ಯತೆಯೇ ಇಲ್ಲ . `ನಾನು ತಪ್ಪು ಮಾಡಿದ್ದಲ್ಲಿ ನನಗೆ ಪ್ರಾಯಶ್ಚಿತ ನೀಡಬೇಕಾಗಿ ಮಂಜುನಾಥ ಸ್ವಾಮಿಯಲ್ಲಿ ಮತ್ತು ಕಾನತ್ತೂರಿನ ನಾಲ್ವರ್ ದೈವಗಳಲ್ಲಿ ಪ್ರಾರ್ಥಿಸುತ್ತೇನೆ. ಅದೇ ರೀತಿ ಭಾಸ್ಕರ ಧರ್ಮಸ್ಥಳ ತಪ್ಪು ಮಾಡಿದಲ್ಲಿ ಅವನಿಗೆ ಪ್ರಾಯಶ್ಚಿತ ನೀಡಬೇಕಾಗಿ ಪ್ರಾರ್ಥಿಸುತ್ತೇನೆ ಎಂದರು.