ಪುತ್ತೂರು; ಮಾಲೀಕ ಬಾಡಿಗೆಗೆ ಓಡಿಸಲು ನೀಡಿದ್ದ ಲಾರಿಯನ್ನು ಡ್ರೈವರ್ ಅಡವಿಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಅಲ್ಲದೇ ಕೇಳಲು ಹೋದ ಲಾರಿ ಮಾಲೀಕನಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ಮಾರ್ಚ್ ತಿಂಗಳಲ್ಲಿ ತಮ್ಮ ಲಾರಿಗೆ ಚಾಲಕನ್ನು ನೇಮಿಸಿ ಲಾರಿಯನ್ನು ಆತನ ಕೈಗೆ ಕೊಟ್ಟಿದ್ದರು.ಆದರೆ ತುಂಬಾ ಸಮಯ ಕಳೆದರೂ ಚಾಲಕ ಬಾಡಿಗೆ ಹಣ ಮಾಲೀಕರಿಗೆ ನೀಡದೆ ಮುಂದೂಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿಚಾರಿಸಿದ ಮಾಲೀಕರು ಲಾರಿಯನ್ನು ಮರಳಿಸುವಂತೆ ಕೇಳಿದಾಗ ಲಾರಿಯನ್ನೂ ನೀಡದೆ ದಬಾಯಿಸಿದ ಎನ್ನಲಾಗಿದೆ. ಕೆಲ ದಿನಗಳ ಬಳಿಕ ಮತ್ತೆ ವಿಚಾರಿಸಿದಾಗ ಲಾರಿಯನ್ನು ಮಂಗಳೂರಿನ ವ್ಯಕ್ತಿಯೊಬ್ಬರ ಬಳಿ ಇಟ್ಟಿದ್ದೇನೆ. ಬೇಕಿದ್ದರೆ ನೀವೇ ಪಡೆದುಕೊಳ್ಳಿ ಎಂಬ ಹಾರಿಕೆ ಉತ್ತರ ನೀಡಿದ್ದಾನೆ.
ಇದರಂತೆ ಲಾರಿ ಮಾಲೀಕ ತನ್ನ ಗಾಡಿಗೆ ಲೋನ್ ನೀಡಿದ ಸಂಸ್ಥೆಯ ಪ್ರತಿನಿಧಿಯ ಜತೆಗೂಡಿ ಮಂಗಳೂರಿನ ವ್ಯಕ್ತಿಯ ಬಳಿಗೆ ತೆರಳಿ ವಿಚಾರಿಸಿದಾಗ ಆತ ಲಾರಿ ತನ್ನ ಬಳಿ ಇರುವುದನ್ನು ಒಪ್ಪಿಕೊಂಡಿದ್ದಾನಾದರೂ ಲಾರಿಯನ್ನು ಮರಳಿಸಲು ನಿರಾಕರಿಸಿದ್ದಾನೆ ಮತ್ತು ಗಾಡಿ ಕೇಳಿದ ಮಾಲೀಕರುಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಲಾರಿ ಮಾಲೀಕರು ತಾನು ನೇಮಿಸಿದ್ದ ಚಾಲಕ ಮತ್ತು ಲಾರಿಯನ್ನು ಇಟ್ಟುಕೊಂಡಿರುವ ವ್ಯಕ್ತಿ ಕಿರಣ್ ಎಂಬಾತನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.