ಬೆಳ್ತಂಗಡಿ : ಕಳೆದ ಒಂದು ವರ್ಷದಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಎಸ್ಐ -1 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಕೃಷ್ಣಕಾಂತ್ ಪಾಟೀಲ್ ಅವರನ್ನು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಇನ್ನೂ ಕೃಷ್ಣಕಾಂತ್ ಪಾಟೀಲ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಅನಿಲ್ ಕುಮಾರ್.ಡಿ ಅವರನ್ನು ನೇಮಕ ಮಾಡಲಾಗಿದೆ. ಇಂದು ಧರ್ಮಸ್ಥಳ ಠಾಣೆಯಲ್ಲಿ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಅವರಿಂದ ಅನಿಲ್ ಕುಮಾರ್.ಡಿ ಅಧಿಕಾರ ಸ್ವೀಕರಿಸಿಕೊಂಡರು.
ಕೃಷ್ಣಕಾಂತ್ ಪಾಟೀಲ್ ಅವರು ಪ್ರಾಮಾಣಿಕ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ಒಳ್ಳೆಯ ಜನಸ್ನೇಹಿಯಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.
ಕ್ಲಿಷ್ಟಕರ ಪ್ರಕರಣವನ್ನು ಬೇಧಿಸಿದ್ದ ಪಿಎಸ್ಐ ಕೃಷ್ಣಕಾಂತ್ ಪಾಟೀಲ್
ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಕುಂದಾಪುರ ಮೂಲದ ಯಾತ್ರಾರ್ಥಿಯ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಒಂದೇ ವಾರದಲ್ಲಿ ಮಹಾರಾಷ್ಟ್ರದ ಪುಣೆಯ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಹಾಗೂ ಹಣ ವಶಪಡಿಸಿಕೊಂಡಿದ್ದರು. ಸೌತಡ್ಕ ದೇವಸ್ಥಾನದಲ್ಲಿ ಯಾತ್ರಾರ್ಥಿಯೊಬ್ಬರ ಬ್ಯಾಗ್ ನಿಂದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಆರೋಪಿ ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ವಿಟ್ಲ ಆಟೋ ಚಾಲಕ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಚಾರ್ಮಾಡಿ ಮೂಲಕ ಪರಾರಿಯಾಗುವಾಗ ಮೂರು ಗಂಟೆಯೊಳಗೆ ಬಂಧಿಸಿ ವಿಟ್ಲ ಪೊಲೀಸರಿಗೆ ಹಸ್ತಾಂತರ ಮಾಡಿದ್ದರು. ಬೆಳಾಲಿನಲ್ಲಿ 85 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ಮತ್ತು ಹಣ ದರೋಡೆ ಮಾಡಿದ ಪ್ರಕರಣದಲ್ಲಿ ಏಳು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದರು.