Tuesday, April 16, 2024
Homeಕರಾವಳಿಮೃತದೇಹದಿಂದ ಕೊರೋನ ಸೋಂಕು ಹರಡುವುದಿಲ್ಲ: ಜಿಲ್ಲಾಡಳಿತದಿಂದ ಸ್ಪಷ್ಟನೆ

ಮೃತದೇಹದಿಂದ ಕೊರೋನ ಸೋಂಕು ಹರಡುವುದಿಲ್ಲ: ಜಿಲ್ಲಾಡಳಿತದಿಂದ ಸ್ಪಷ್ಟನೆ

spot_img
- Advertisement -
- Advertisement -

ಮಂಗಳೂರು, ಎ.24: ಕೊರೋನ ಸೋಂಕಿತರ ಮೃತ ದೇಹದಿಂದ ಸೋಂಕು ಹರಡಿರುವ ಬಗ್ಗೆ ಎಲ್ಲಿಂದಲೂ ವರದಿಯಾಗಿಲ್ಲ. ಜನರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಾಹಿತಿಯ ಕೊರತೆ
ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿ ಕೊರತೆ ಹಾಗೂ ತಪ್ಪು ಕಲ್ಪನೆಯಿದೆ. ಹಾಗಾಗಿ ಕೆಲವೊಂದು ಕಡೆ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸುತ್ತಿರುವುದು ವರದಿಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶದನದಂತೆ, ಕೊರೋನ ಸೋಂಕಿತರು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರದ ಬಗ್ಗೆ ಕೇಂದ್ರ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಮಾನ್ಯ ಎಚ್ಚರಿಕೆಯನ್ನು ಪಾಲಿಸುವ ಮೂಲಕ ಶವಸಂಸ್ಕಾರ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಗತ್ಯ ಸುರಕ್ಷಾ ಕ್ರಮ
ಚಿತಾಗಾರದಲ್ಲಿ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೋನದಿಂದ ಮೃತಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯವಿರುವುದಿಲ್ಲ. ಅವರು ಕೈಗಳನ್ನು ಮುಚ್ಚಿ, ಕಾಲುಚೀಲ ಧರಿಹಿಸುವುದು, ಮುಖ ಕವಚಗಳನ್ನು ಧರಿಹಿಸುವುದು (ಪಿಪಿಇ) ಹಾಗೂ ಕೈಗಳನ್ನು ತೊಳೆದುಕೊಳ್ಳುವಂತಹ ಸಾಮಾನ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಸಂಬಂಧಿಕರಿಗೆ ಪಾಲ್ಗೊಳ್ಳಲು ಅವಕಾಶ
ಕೊರೋನ ಸೋಂಕಿತ ಮೃತರ ದೇಹವನ್ನು ಸಂಬಂಧಿಕರು ದೂರದಿಂದ ವೀಕ್ಷಿಸಬಹುದು. ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಿಸಲು ಅವಕಾಶ ನೀಡಬಹುದು. ಆದರೆ, ಮೃತ ದೇಹವನ್ನು ಮುಟ್ಟುವುದಕ್ಕಾಗಲಿ, ಮುತ್ತಿಕ್ಕುವುದಕ್ಕಾಗಲಿ ಅಥವಾ ತಬ್ಬಿಕೊಳ್ಳುವುದಕ್ಕಾಗಲಿ ಅವಕಾಶವಿಲ್ಲ. ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಸಾಮಾನ್ಯ ಶುಚಿತ್ವ ಅಂತರೆ ಕೈತೊಳೆಯುವುದು, ಮಾಸ್ಕ್ ಧಾರಣೆ ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಧಾರ್ಮಿಕ ಗ್ರಂಥ ಪಠಣ
ಕುಟುಂಬದ ಧಾರ್ಮಿಕ ಸಂಪ್ರದಾಯಗಳ ಅನುಸಾರ ಧಾರ್ಮಿಕ ಗ್ರಂಥಗಳ ಪಠಣ, ಪವಿತ್ರ ನೀರನ್ನು ಸಿಂಪಡಿಸುವುದು ಇತ್ಯಾದಿಗಳನ್ನು ದೇಹವನ್ನು ಮುಟ್ಟದೇ ಮಾಡಲು ಅವಕಾಶವಿರುತ್ತದೆ ಎಂದು ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರದ ಬಗ್ಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾರ್ಗಸೂಚಿಗಳ ಕುರಿತಂತೆ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ವಿವರಿಸಿದ್ದಾರೆ.

ಹೂಳುವುದು ಅಥವಾ ದಹನಕ್ಕೆ ಅವಕಾಶ
ಮೃತದೇಹವನ್ನು ಹೂಳುವುದು ಅಥವಾ ದಹನ ಈ ಎರಡು ವಿಧದಲ್ಲಿಯೂ ಸಹ ಅಂತ್ಯಕ್ರಿಯೆಯನ್ನು ಆಚರಿಸಬಹುದು. ದಹಿಸಿದ ದೇಹದ ಬೂದಿಯಿಂದ ಯಾವುದೇ ವೈರಾಣು ಹರಡುವಿಕೆ ಸಾಧ್ಯತೆ ಇಲ್ಲ ಆದ್ದರಿಂದ ಬೂದಿಯನ್ನು ಸಂಗ್ರಹಿಸಿ, ಇತರೆ ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ಕೊರೋನ ಸೋಂಕಿತರು ಮೃತರಾಗುವ ಮೊದಲು ಅವರ ಸಂಪರ್ಕಕ್ಕೆ ಬಂದಿದ್ದ ಬಂಧು ಬಳಗದವರಿಗೆ ಮೊದಲೇ ಕೊರೋನ ಹರಡಿರುವ ಸಾಧ್ಯತೆ ಇರುವುದರಿಂದ ಅಂತ್ಯ ಸಂಸ್ಕಾರದಲ್ಲಿ ಆ ಮನೆಮಂದಿ ಭಾಗಿಯಾಗುತ್ತಾರೆಂಬ ಕಾರಣಕ್ಕೆ ಅವರಿಂದ ಇತರರಿಗೆ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದಲೇ ಅಂತ್ಯ ಸಂಸ್ಕಾರದ ವೇಳೆ ಹೆಚ್ಚು ಜನರಿರಬಾರದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದು ಕೊಳ್ಳಬೇಕೆಂದು ಸೂಚಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!