ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಕುಸಿತ, ತಡೆಗೋಡೆ ಕುಸಿತಗಳು ಸಂಭವಿಸಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಆ.೧ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿದರು.

ಈ ಸಂದರ್ಭ ಮಡ್ಡಡ್ಕ – ಪಡಂಗಡಿ ರಸ್ತೆ ಕುಸಿತದ ಸ್ಥಳ, ಗುರುವಾಯನಕೆರೆ ಮಸೀದಿಯ ತಡೆಗೋಡೆ ಕುಸಿತ ಸ್ಥಳ, ಲಾಲ ಗ್ರಾಮದ ಆಯಿಲ ಪ್ರದೇಶದ ರಸ್ತೆ ಕುಸಿತಕ್ಕೊಳಗಾದ ಸ್ಥಳ, ಮಳೆಯಿಂದಾಗಿ ಬಿರುಕು ಬಿಟ್ಟಿರುವ ಸವಣಾಲು ಪಿಜಕಲ ರಸ್ತೆಯ ಪ್ರದೇಶ, ಮರೋಡಿ, ವೇಣೂರು ಮತ್ತು ಆರಂಬೋಡಿ ಸೇರಿದಂತೆ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿಧಾನ ಪರಿಷತ್ ಶಾಸಕರಾದ ಪ್ರತಾಪ ಸಿಂಹ ನಾಯಕ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸೇರಿದಂತೆ ವಿವಿಧ ಮುಖಂಡರುಗಳು ಜೊತೆಗಿದ್ದು, ಅಧಿಕಾರಿಗಳಿಗೆ ಸಮಸ್ಯೆಗಳನ್ನು ವಿವರಿಸಿದರು.
ಮಳೆಹಾನಿ ಪ್ರದೇಶಗಳ ಪರಿಶೀಲನೆ ವೇಳೆ ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ್ ಬುಣ್ಣನ್ನ್ ಅವರು ಮರೋಡಿ ಗ್ರಾಮದ ವಿಎ ಶಿವಕುಮಾರ್ ವಿರುದ್ಧ ಕರ್ತವ್ಯ ಲೋಪ ಆರೋಪ ಮಾಡಿದ್ದು ಜಿಲ್ಲಾಧಿಕಾರಿಗಳು ತಕ್ಷಣ ವಿಎ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಅವರನ್ನು ಅಮಾನತು ಮಾಡುವಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಆದೇಶ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕರ್ತವ್ಯ ಲೋಪದ ಆರೋಪ ಹಿನ್ನೆಲೆ ವಿ.ಎ. ಅವರುನ್ನು ಅಮಾನತು ಗೊಳಿಸಲು ಆದೇಶಿಸಲಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಪರಿಸ್ಥಿತಿ ಕೆಟ್ಟದಾಗಿ ಆಗದಂತೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.