ಮಂಗಳೂರು: ವರುಣನ ರಕ್ಕಸವತಾರಕ್ಕೆ ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಅಜ್ಜಿ, ಮೊಮ್ಮಕ್ಕಳ ಅಂತ್ಯ ಸಂಸ್ಕಾರ ಶನಿವಾರ ನೆರವೇರಿತು.
ಘಟನೆಯಲ್ಲಿ ಸಾವನ್ನಪ್ಪಿದ ಅಜ್ಜಿ ಪ್ರೇಮ ಹಾಗೂ
ಸೀತಾರಾಮ್ ಪೂಜಾರಿ ಮತ್ತು ಅಶ್ವಿನಿ ಪೂಜಾರಿ ದಂಪತಿಯ ಇಬ್ಬರು ಮಕ್ಕಳು ಆರ್ಯನ್ ಮತ್ತು ಆರುಷ್ ಪ್ರಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು. ಇನ್ನು ಮೊಮ್ಮಕಳ ಸಮಾಧಿ ಪಕ್ಕದಲ್ಲೇ ಅಜ್ಜಿ ಪ್ರೇಮಾ ಅಂತ್ಯಕ್ರಿಯೆ ನೆರವೇರಿಸಲಾಯಿತು.ಕುಟುಂಬದ ದಯನೀಯ ಸ್ಥಿತಿ ಕಂಡು ಇಡೀ ಊರಿಗೆ ಊರೇ ಕಂಬನಿ ಮಿಡಿಯಿತು.
ಇನ್ನು, ದುರಂತ ನಡೆದ ಸ್ಥಳದಲ್ಲಿ ಬಿದ್ದಿರುವ ಅವಶೇಷಗಳು ದುರಂತದ ಕಥೆಯನ್ನು ಹೇಳುತ್ತಿವೆ. ಮನೆಯೊಳಗಿನ ಮಂಚ, ದಿಂಬು, ಪಾತ್ರೆಗಳು ಅಂಗಳದಲ್ಲಿ ಬಿದ್ದಿವೆ. ಮನೆಯ ಅವಶೇಷಗಳ ಅಡಿಯಿಂದ ಬಂದ ಎರಡು ಪುಟ್ಟ ಬೆಕ್ಕಿನ ಮರಿಗಳು ತಮ್ಮ ಯಜಮಾನನ್ನು ಹುಡುಕುತ್ತಿರುವ ದೃಶ್ಯ ಮನಕಲಕುವಂತಿತ್ತು. ಕಾಂತಪ್ಪ ಪೂಜಾರಿ ಹಾಗೂ ಸೀತಾರಾಮ ಅವರ ಪತ್ನಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.