ಬೆಂಗಳೂರು: ಮಂಗಳೂರು ನಗರ ಪಾಲಿಕೆಯು ಜನರು ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವುದನ್ನು ತಡೆಯದ ಕಾರಣ ಹೈಕೋರ್ಟ್ ಛೀಮಾರಿ ಹಾಕಿದ್ದಲ್ಲದೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಕೆಎಸ್ಪಿಸಿಬಿ) ನಿರ್ದೇಶನ ನೀಡಿದೆ.
ಫಲ್ಗುಣಿ ನದಿಗೆ ಪಚ್ಚನಾಡಿ ತ್ಯಾಜ್ಯ ಶುದ್ಧೀಕರಣ ಘಟಕದಿಂದ ಕಲುಷಿತ ನೀರು ಹರಿ ಬಿಡಲಾಗುತ್ತಿದೆ ಎಂಬುದನ್ನು ಕೆಎಸ್ಪಿಸಿಬಿ ವರದಿ ಬಹಿರಂಗಪಡಿಸಿತ್ತು, ಆದರೆ ಇದನ್ನು ತಡೆಯುವಂತಹ ಹೆಲಸವನ್ನು ಮಾತ್ರ ಮಾಡಲಿಲ್ಲ. ಮಂಗಳೂರಿಗರಿಗೆ ಪಾಲಿಕೆ ಕಲುಷಿತ ನೀರು ಕುಡಿಸುತ್ತಿದ್ದರೆ ನ್ಯಾಯಾಲಯ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮಳವೂರು ನೀರು ಸಂಸ್ಕರಣಾ ಘಟಕದಲ್ಲಿ ‘ಮುಗ್ರೊಡಿ ಕನ್ಸ್ಟ್ರಕ್ಷನ್’ ಎಂಬ ಸಂಸ್ಥೆ ಸಲ್ಲಿಸಿದ ಪರೀಕ್ಷಾ ವರದಿಯನ್ನು ಸರ್ಕಾರ ಸಲ್ಲಿಸಿತು. 40 ವರ್ಷದಷ್ಟು ಹಳೆಯದಾದ ಪಚ್ಚನಾಡಿ ಘಟಕವನ್ನು ಹಂತ-ಹಂತವಾಗಿ ಸ್ಥಳಾಂತರ ಮಾಡಬೇಕಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.
ನೀರಿನ ಗುಣಮಟ್ಟ ಪರೀಕ್ಷೆಗೆ ಯಾವ ಕಾನೂನಿನ ಅಡಿಯಲ್ಲಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಲಾಯಿತು ಎಂಬುದು ಅರ್ಥವಾಗದ ಸಂಗತಿ’ ಎಂದು ಛೀಮಾರಿ ಹಾಕಿದ ಪೀಠ, ವರದಿ ತಿರಸ್ಕರಿಸಿತು.
ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ಪಿಸಿಬಿಗೆ ಪೀಠ ನಿರ್ದೇಶನ ನೀಡಿತು. ನೀರಿನ ಗುಣಮಟ್ಟ ಮತ್ತು ತ್ಯಾಜ್ಯ ಸ್ಥಳಾಂತರದ ಕುರಿತು ತಿಂಗಳಿಗೊಮ್ಮೆ ವರದಿ ಸಲ್ಲಿಸುವಂತೆ ಕೆಎಸ್ಪಿಸಿಬಿ ಮತ್ತು ಪಾಲಿಕೆಗೆ ನಿರ್ದೇಶನ ನೀಡಿತು.