
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿಕೊಂಡು ಶಂಕಿತ ಅಕ್ರಮ ಹಣ, ಕ್ರಿಮಿನಲ್ ಸಂಚು ರೂಪಿಸುತ್ತಿರುವ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮದ ಸುರೇಂದ್ರ ಪ್ರಭು ಎಂಬವರು ಬೆಳ್ತಂಗಡಿ ಎಸ್ ಐ ಟಿ ಠಾಣೆಗೆ, ಮಂಗಳೂರು ಆದಾಯ ತೆರಿಗೆ ಕೇಂದ್ರಕ್ಕೆ, ಮಂಗಳೂರಿನ ಜಾರಿ ನಿರ್ದೇಶನಲಯಕ್ಕೆ ಹಾಗೂ ಜಿಲ್ಲಾ ಎಸ್ಪಿ ಅವರಿಗೆ ಸೆ. 9ರಂದು ದೂರು ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಹೆಚ್ಚಿನ ಯೂಟ್ಯೂಬ್ ಚಾನೆಲ್ ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇವಾಲಯದ ವಿರುದ್ಧ ಸುಳ್ಳು ನಿರೂಪಣೆ ಸೃಷ್ಟಿಸುವ ಉದ್ದೇಶದಿಂದ ನಿರಂತರವಾಗಿ ಮಾನನಷ್ಟ, ಚೋದನಕಾರಿ,ದಾರಿ ತಪ್ಪಿಸುವ ವಿಷಯ ಮತ್ತು ಏಕಪಕ್ಷಿಯ ನಿರೂಪಣೆ ಬಿತ್ತರಿಸುತ್ತಿವೆ. ಇದೊಂದು ಯೋಜಿತ ಪಿತೂರಿಯ ಭಾಗವಾಗಿದ್ದು ಇದನ್ನು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಕ್ಕೂ ವಿಸ್ತರಿಸಲಾಗುತ್ತಿದೆ. ಇಂತಹ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಪರಿಸರ ವ್ಯವಸ್ಥೆ ಹಾಗೂ ಇದರ ಹಿಂದೆ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. 17 ಕನ್ನಡ,2 ಆಂಗ್ಲ 2 ಮಲಯಾಳಂ,10 ತಮಿಳು ಹಾಗೂ ಒಂದು ತೆಲುಗು ಯೂಟ್ಯೂಬ್ ಚಾನೆಲ್ ಗಳ ಹಾಗೂ ಸುದ್ದಿ ವಾಹಿನಿಗಳ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದು ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ


