ಬೆಳ್ತಂಗಡಿ: ದುರ್ಗಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್(48) ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣ ಸಂಬಂಧ ಬಸ್ ಚಾಲಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಲ್ಲೂರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಜೂ.28 ರಂದು ಬೆಳಗ್ಗೆ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಕರ್ತವ್ಯ ನಿರತ ಬಳೆಂಜ ನಿವಾಸಿ ಅವಿವಾಹಿತ ಗ್ರಾಮ ಸಹಾಯಕ ಜಯರಾಜ್ ಸಾವನ್ನಪ್ಪಿದ್ದರು

ಪ್ರಕರಣ ತಿರುಚಲು ಪ್ರಯತ್ನ: ಬಸ್ ಚಾಲಕನಿಂದ ಬೈಕ್ ಗೆ ಡಿಕ್ಕಿ ಹೊಡೆದ ಪ್ರಕರಣವನ್ನು ಬೈಕ್ ಸವಾರ ಓವರ್ ಟೇಕ್ ಮಾಡಿ ಬಸ್ ಗೆ ಡಿಕ್ಕಿ ಹೊಡೆದಿದ್ದು ಎಂಬಂತೆ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಬಸ್ ಚಾಲಕ ಹೋಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಸವಾರನ ತಪ್ಪು ಎಂಬಂತೆ ಸುಳ್ಳು ಸುದ್ದಿಗಳನ್ನು ವರದಿ ಮಾಡಿ ಮೊದಲೇ ಕಿಡಿಗೇಡಿಗಳು ಹಬ್ಬಿಸಿದ್ದರು. ಅದಲ್ಲದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದುರ್ಗಾ ಬಸ್ ಮಾಲೀಕರ ಆರ್.ಟಿ.ಓ ಇಲಾಖೆಯ ಮಧ್ಯವರ್ತಿಯೊಬ್ಬ ಬಂದು ತಹಶೀಲ್ದಾರ್ ಜೊತೆ ಪ್ರಕರಣ ತಿರುಚುವ ಬಗ್ಗೆ ಮಾತಾನಾಡಲು ಪ್ರಯತ್ನ ಪಟ್ಟಿದ್ದರು. ಈ ವೇಳೆ ಆಲರ್ಟ್ ಆದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ತಕ್ಷಣ ಕುಟುಂಬವನ್ನು ಆಸ್ಪತ್ರೆಗೆ ಕರೆಸಿ ಮಾತಾನಾಡಿ ಧೈರ್ಯ ತುಂಬಿ ದೂರು ನೀಡಲು ಪೊಲೀಸ್ ಠಾಣೆಗೆ ಪ್ರತ್ಯಕ್ಷ ದರ್ಶಿ ಜೊತೆ ಕಳುಹಿಸಿದ್ದಾರೆ. ಅಲ್ಲದೇ ಸ್ವತಃ ತಹಶೀಲ್ದಾರ್ ಬೆಳ್ತಂಗಡಿ ಸಂಚಾರಿ ಠಾಣೆಗೆ ಹೋಗಿ ಕಾನೂನು ಪ್ರಕಾರ ಮಾಡುವಂತೆ ಹೇಳಿದ ಬಳಿಕ ಬಸ್ ಚಾಲಕನ ವಿರುದ್ಧ ಪ್ರತ್ಯಕ್ಷದರ್ಶಿ ನೀಡಿದ ದೂರಿಗೆ ಪ್ರಕರಣ ದಾಖಲಿಸಲಾಯಿತು. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಸಮಯ ಪ್ರಜ್ಞೆ ಹಾಗೂ ಉತ್ತಮ ಸಮಾಜಮುಖಿ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದುರ್ಗಾ ಬಸ್ ಅವಂತಾರಗಳು:
ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ವಸಂತ ಬಂಗೇರ ಎಂಬವರಿಗೆ ಸೇರಿದ ‘ದುರ್ಗಾ ಬಸ್’ ಒಂದು ವರ್ಷದಲ್ಲಿ ನಿರ್ಲಕ್ಷ್ಯತನದ ಚಾಲನೆಯಿಂದ ಮೂರು ಅಪಘಾತ ನಡೆಸಿದ್ದು ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅತೀವೇಗದ ಚಾಲನೆ, ನಿರ್ಲಕ್ಷ್ಯತನದ ಚಾಲನೆ, ಚಾಲನೆ ವೇಳೆ ಮೊಬೈಲ್ ಉಪಯೋಗ, ಚಾಲನೆ ವೇಳೆ ಪ್ರಯಾಣಿಕರ ಜೊತೆ ಮಾತನಾಡೋದು ಹೀಗೆ ಅನೇಕ ಆರೋಪಗಳನ್ನು ಪ್ರಯಾಣಿಕರು ಮಾಡಿದ್ದಾರೆ.

ಪ್ರಕರಣ ದಾಖಲು: ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದುರ್ಗಾ ಬಸ್ ಚಾಲಕ ದಿಡುಪೆಯ ಸುದರ್ಶನ್ ವಿರುದ್ಧ ಪ್ರತ್ಯಕ್ಷ ದರ್ಶಿ ಮನೋಹನ್ ನೀಡಿದ ದೂರಿನ ಮೇರೆಗೆ 279,304(a) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ