ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ಮಡಂತ್ಯಾರ್ ನಿವಾಸಿ ರಾಜೇಶ್ ಕೆ (43) ಎಂಬವರು ದೂರು ದಾಖಲಿಸಿದ್ದಾರೆ. 2024 ನೇ ಇಸವಿಯಲ್ಲಿ ಫೇಸ್ ಬುಕ್ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ಪರಿಚಯವಾಗಿ ನಂತರದ ದಿನಗಳಲ್ಲಿ ಆಕೆಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದೇನೆ. ಸಂಧ್ಯಾ ಪವಿತ್ರ ನಾಗರಾಜ್ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ತಾನು ನೊಂದವರಿಗೆ ಹಾಗೂ ವಂಚನೆಗೊಳಪಟ್ಟ ಅನೇಕರಿಗೆ ಸಹಾಯ ಮಾಡಿರುವುದಾಗಿ ತಿಳಿಸಿದ್ದು, ಈ ವೇಳೆ ರಾಜೇಶ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ ತಿಳಿಸಿ ಸಹಾಯ ಕೇಳಿರುತ್ತಾರೆ. ಪ್ರಕರಣವನ್ನು ಬಗೆಹರಿಸಿಕೊಡುವುದಾಗಿ ನಂಬಿಸಿದ ಸಂಧ್ಯಾ ಪವಿತ್ರ ನಾಗರಾಜ್ ಆ ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದು ಹೇಳಿ 2025 ನೇ ಫೆಬ್ರವರಿ- ಮೇ ತಿಂಗಳಿನಲ್ಲಿ ಹಂತ ಹಂತವಾಗಿ ಒಟ್ಟು ರೂ 3,20,000/- ಪಡೆದುಕೊಂಡಿರುತ್ತಾರೆ. ರಾಜೇಶ್ ಪ್ರಕರಣವು ಬಗೆಹರಿಯದ ಹಿನ್ನೆಲೆಯಲ್ಲಿ ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಆಕೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದರಿಂದ ಫಿರ್ಯಾಧಿದಾರರು ಸಂಶಯಗೊಂಡು ಆಕೆಯ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವುದನ್ನು ತಿಳಿದು ಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿರವರು ನೀಡಿದ ದೂರಿನ ಮೇರೆಗೆ ದಿನಾಂಕ: 20.06.2025 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.