ಬೆಂಗಳೂರು: ಶಾಸಕರ ಆಪ್ತ ತನ್ನ ಫೇಸ್ಬುಕ್ ಖಾತೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ ಮಾಡಿದ ಸಂಬಂಧಿಸಿದಂತೆ ಕಾವಲ್ಬೈರಸಂದ್ರದಲ್ಲಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮತ್ತು ಕಚೇರಿ ಮೇಲೆ ಉದ್ರಿಕ್ತ ಗುಂಪೊಂದು ಮಂಗಳವಾರ ತಡ ರಾತ್ರಿ ದಾಳಿ ನಡೆಸಿ ಬೆಂಕಿ ಹಚ್ಚಿದೆ.
ಜತೆಗೆ ಕಾಡಗೊಂಡನಹಳ್ಳಿ ಪೊಲೀಸ್ ಠಾಣೆಗೆ ದಿಗ್ಬಂಧನ ಹಾಕಿದ ಗುಂಪು, ಶಾಸಕರು ಹಾಗೂ ಅವರ ಸಂಬಂಧಿ ನವೀನ್ ಮನೆ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದೆ. ಪೊಲೀಸರತ್ತ ಕಲ್ಲು ತೂರಾಟ ನಡೆಸಿರುವ ಉದ್ರಿಕ್ತರು ಆರೋಪಿ ಠಾಣೆಯಲ್ಲಿದ್ದಾನೆ ಎಂದು ಆರೋಪಿಸಿ ಕೆಲವು ಪೊಲೀಸರಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಉದ್ರಿಕ್ತರತ್ತ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದಾರೆ.
ಕಾವಲ್ ಭೈರಸಂದ್ರದಲ್ಲಿ ಗಲಭೆ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ರು . “ಈಗ ನಡೆಯುತ್ತಿರುವ ಗಲಭೆ, ಬೆಂಕಿ ಹಚ್ಚುವುದು ಕಾನೂನು ಬಾಹಿರವಾದ ಕೃತ್ಯ. ಯಾವುದೇ ವಿಚಾರ ಇದ್ದರೂ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬೇಕು” ಎಂದು ಹೇಳಿದರು. “ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಉಗ್ರ ಕ್ರಮವನ್ನು ಜರುಗಿಸಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕಳಿಸಲಾಗುತ್ತಿದೆ” ಎಂದು ಗೃಹ ಸಚಿವರು ತಿಳಿಸಿದರು.
ಇಷ್ಟಾದರೂ ಸುಮ್ಮನಾಗದ ದುಷ್ಕರ್ಮಿಗಳು ಸಾರ್ವಜನಿಕರ ಮನೆಗೂ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಬಾರ್ ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಯಾರೂ ಸಂಯಮ ಕಳೆದುಕೊಳ್ಳದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.