ಕಾರ್ಕಳ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ಗೆ ವಹಿಸುವಂತೆ ಮೇ 9 ರಂದು ಕರಾವಳಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಜನರು ಭಾಗಿಯಾಗಿ ಷಡ್ಯಂತ್ರ ರೂಪಿಸಿರುವ ಶಂಕೆ ಇದೆ ಅಲ್ಲದೇ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ಹರಿದಿದೆ ಎಂಬ ಅನುಮಾನವಿದೆ. ಇನ್ನು ಮಂಗಳೂರಿನ ಪೊಲೀಸ್ ಅಧಿಕಾರಿಗಳೂ ಕೂಡ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪವಿದೆ. ಹತ್ಯೆಗೆ ಸಹಕರಿಸಿದ ಮಹಿಳೆಯರನ್ನು ಇನ್ನೂ ಬಂಧಿಸಿಲ್ಲ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಮೂಲಕವೇ ತನಿಖೆ ನಡೆಸಿದಲ್ಲಿ ಮಾತ್ರ ಸತ್ಯ ಬಹಿರಂಗವಾಗಲು ಸಾಧ್ಯ. ಆದರೆ ರಾಜ್ಯ ಸರಕಾರ ಈ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇಲ್ಲ. ಹಾಗಾಗಿ ರಾಜ್ಯಪಾಲರನ್ನು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಲು ಉಭಯ ಜಿಲ್ಲೆಯ (ದಕ್ಷಿಣ ಕನ್ನಡ, ಉಡುಪಿ) ಶಾಸಕರು ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.