ಬೆಳ್ತಂಗಡಿ: ಪ್ರೀತಿಯ ಗಾಳಿ ಬೀಸುತಿದೆ ಸೌಹಾರ್ದತೆಯ ಹಾಡಿನೊಂದಿಗೆ ಮುಕ್ತಾಯಗೊಂಡ ವಿಶೇಷ ದೀಪಾವಳಿ ಮನ ಮನಗಳಲ್ಲಿ ಮನೆ ಮನೆಗಳಲ್ಲಿ ಸ್ನೇಹ , ಪ್ರೀತಿ , ಮಮತೆ ಹಾಗೂ ಸೌಹಾರ್ದತೆಯ ಮಾನವೀಯತೆಯನ್ನು ಪಸರಿಸಿದ ಸಮುದಾಯ ಬೆಳ್ತಂಗಡಿ ತಂಡದ ವಿಶೇಷ ದೀಪಾವಳಿ ಆಚರಣೆ ನೆರಿಯ ಆಲಂಗಾಯಿ ಆದಿವಾಸಿಗಳ ಸಮುದಾಯದ ಮನೆಯಲ್ಲಿ ಮುಕ್ತಾಯಗೊಂಡಿತು.
ದೀಪಾವಳಿ ಕೇವಲ ಒಂದು ಧರ್ಮ , ಮತ , ಜಾತಿಗೆ ಸೀಮಿತವಲ್ಲ , ಅದೊಂದು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಪರಿಕಲ್ಪನೆಯ ವಿಶೇಷ ಆಚರಣೆ. ಈ ಕಾರಣಕ್ಕಾಗಿ ಹಿಂದೂ , ಮುಸ್ಲಿಂ , ಕ್ರೈಸ್ತ , ದಲಿತ , ಆದಿವಾಸಿಗಳ ಮನೆಗಳಲ್ಲಿ ಸೌಹಾರ್ದತೆಯ ದೀಪ ಹಚ್ಚಿ ವಿಶೇಷವಾಗಿ ದೀಪಾವಳಿ ಆಚರಿಸುವ ಹೊಸ ಇತಿಹಾಸವನ್ನು ಆಚರಿಸಲಾಯಿತು ಎಂದು ಸಮುದಾಯ ಬೆಳ್ತಂಗಡಿಯ ಅಧ್ಯಕ್ಷ , ಉಪನ್ಯಾಸಕ ಸುಜೀತ್ ರಾವ್ ಉಜಿರೆ ಹೇಳಿದರು.

ಸೌಹಾರ್ದತೆ ಕೆಡುತ್ತಿರುವ ಸಂದರ್ಭದಲ್ಲಿ ನಿಜವಾದ ಮನುಜ ಮತ ವಿಶ್ವ ಪಥದ ಹಾದಿಯನ್ನು ತೋರಿಸುವ ಸಲುವಾಗಿ ಬೆಳ್ತಂಗಡಿಯ ಸಮುದಾಯ ಹಾಡುಗಾರರ ತಂಡ ಮನೆ ಮನೆಗಳಿಗೆ ತೆರಳಿ ಅಲ್ಲಿ ಮಾನವೀಯತೆ ಎತ್ತಿ ಹಿಡಿಯುವ ಹಾಡು, ಪೃಕೃತಿಯ ಉಳಿವಿನ, ರೈತರ ,ಸ್ವಚ್ಚತೆಯ ಹಾಗೂ ಆರೋಗ್ಯದ ಹಾಡುಗಳನ್ನು ಹಾಡುವ ಜೊತೆಗೆ ಮಾತು , ಹರಟೆಯೊಂದಿಗೆ ಅರಿವು ಮೂಡಿಸುತ್ತಿರುವುದು ಈ ತಂಡದ ವಿಶೇಷ . ಈ ತಂಡವು ನವೆಂಬರ್ 3 ರಂದು ಸಾಹಿತಿ ದಂಪತಿಗಳಾದ ಆತ್ರಾಡಿ ಅಮೃತಾ ಶೆಟ್ಟಿ- ಪಿ ಡೀಕಯ್ಯರವರ ಮನೆಯಲ್ಲಿ ಉದ್ಘಾಟನೆಗೊಂಡ ಈ ಕಾರ್ಯಕ್ರಮ ನಿರಂತರವಾಗಿ ನಡೆದು ನವೆಂಬರ್ 6 ರಂದು ನೆರಿಯ ಗ್ರಾಮದ ಸಿಯೋನ್ ಆಶ್ರಮದಲ್ಲಿ ಕಾರ್ಯಕ್ರಮದ ಬಳಿಕ ಮಾಜಿ ಎಪಿಎಂಸಿ ಉಪಾಧ್ಯಕ್ಷ , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕ ಲಕ್ಷ್ಮಣ ಆಲಂಗಾಯಿ ಅವರ ಮನೆಯಲ್ಲಿ ಸಮಾಸ್ತಿಗೊಂಡಿತು.

ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಜನರು ಉಪಸ್ಥಿತರಿದ್ದರು. ನೆರೆದಿದ್ದ ಜನರ ಮನಸ್ಸಿನಲ್ಲಿ ಪ್ರೀತಿಯ ಗಾಳಿ ಬೀಸುತಿದೆ ಎಂಬ ಅರಿವನ್ನು ಮೂಡಿಸುವ ಸೌಹಾರ್ದತೆಯ ಹಾಡನ್ನು ಹಾಡಿ ಸೌಹಾರ್ದತೆಯ ದೀಪ ಬೆಳಗಿ ನಿಜವಾದ ಅರ್ಥದಲ್ಲಿ ದೀಪಾವಳಿ ಆಚರಿಸಿದ ತಂಡದಲ್ಲಿ ರಂಗಭೂಮಿ ಕಲಾವಿದ ಪ್ರಶಾಂತ್ ಬೆಳ್ತಂಗಡಿ , ಹಿರಿಯ ಆಕಾಶವಾಣಿ , ದೂರದರ್ಶನ ಕಲಾವಿದ , ರಾಜ್ಯ ಪ್ರಶಸ್ತಿ ವಿಜೇತ ಹೆಚ್ ಕೃಷ್ಣಯ್ಯ ಲಾಯಿಲ , ಶಿಕ್ಷಕಿ , ಬಹುಮುಖಿ ಕಲಾವಿದೆ ಆಶಾ ಕುಮಾರಿ , ಕಲಾವಿದ ಸತೀಶ್ ಕಕ್ಕೆಪದವು ಇದ್ದರು. ಈ ಸಂದರ್ಭದಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ಮುಖಂಡರು , ಸಾರ್ವಜನಿಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.