ಬೆಳ್ತಂಗಡಿ : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಅವಮಾನ ಅಗುವ ರೀತಿಯಲ್ಲಿ ನಿವಾಸದ ಫೋಟೋ & ಕಚೇರಿಯಲ್ಲಿ ಕುಳಿತಿರುವ ಫೋಟೋಗಳನ್ನು ಬಳಸಿ ಅದನ್ನು ಎಡಿಟ್ ಮಾಡಿ ಸಿದ್ದರಾಮಯ್ಯ ಕಲೆಕ್ಟರ್ ಮಾಸ್ಟರ್ (CM) ಎಂದು ಹಾಕಿರುವ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ಶೇಖರ್ ಕುಕ್ಕೇಡಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸರು 26/10/2023 ರಂದು IPC 1860(U/s-504,505(2)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ಸಾಮಾಜಿಕ ತಾಣಗಳ ಸಂಸ್ಥೆಗಳಿಂದ ಎಡಿಟ್ ಮಾಡಿದ ಪೋಸ್ಟ್ ಗಳ ವರದಿ ತರಿಸಿಕೊಂಡು ತನಿಖೆ ಮಾಡಿ ಒಂದು ವರ್ಷದ ಬಳಿಕ ಬೆಂಗಳೂರು ಜನ ಪ್ರತಿನಿಧಿಗಳ ಕೋರ್ಟ್ ನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರುಳೀಧರ್ ನಾಯ್ಕ್ ಮತ್ತು ಎಎಸ್ಐ ತೀಲಕ್ ರಾಜ್ ಅವರು ಸೆ.12 ರಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣ ದಾಖಲಾಗಿದ್ದರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಈವರೆಗೆ ಕೋರ್ಟ್ ನಿಂದ ಜಾಮೀನು ಪಡೆದುಕೊಳ್ಳದ ಕಾರಣದಿಂದ ಬೆಳ್ತಂಗಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಗ್ಗೆ ಸೆ.14 ರಂದು ಶಾಸಕ ಹರೀಶ್ ಪೂಂಜ ಅವರಿಗೆ ಖುದ್ದು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.