ಬಂಟ್ವಾಳ ಪೋಲಿಸ್ ಠಾಣಾ ವ್ಯಾಪ್ತಿಯ ಕಾರಾಜೆ ಎಂಬಲ್ಲಿ ವಾಸವಿರುವ ವಿಧವೆ ಮಹಿಳೆಯೋರ್ವರ ಮನೆಗೆ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶರೀಫ್ ಯಾನೆ ಚೊಟ್ಟೆ ಶರೀಫ್, ಪುರಸಭಾ ಸದಸ್ಯ ರೌಡಿ ಶೀಟರ್ ಹಸೈನಾರ್ ಹಾಗೂ ಸಮೀರ್ ನಂದಾವರ ಎಂಬ ಆರೋಪಿಗಳು ಅಕ್ರಮವಾಗಿ ನುಗ್ಗಿ ಮಹಿಳೆಯ ಮೈಗೆ ಕೈ ಹಾಕಿ ವಸ್ತ್ರ ಹರಿದು ಹಲ್ಲೆ ಹಾಗೂ ಮಾನಭಂಗ ನಡೆಸಿ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪ್ರಕರಣದ ಸಾರಾಂಶ:
ಸಂತ್ರಸ್ತೆ ಮಹಿಳೆಯು ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಲ್ಲಿರುವ ಭಾರತ್ ಕಮರ್ಷಿಯಲ್ ಕಾಂಪ್ಲೆಕ್ಸಿನ ಮಾಲಕಿಯಾಗಿರುತ್ತಾಳೆ. ಅವರ ಗಂಡ ಸುಮಾರು 8 ವರ್ಷಗಳ ಹಿಂದೆ ಮರಣ ಹೊಂದಿದ್ದು, ಸದ್ರಿ ಕಟ್ಟಡದ ಕೆಲವು ದಾಖಲೆಗಳನ್ನು ಸರಿ ಮಾಡಿ ಕೊಡುತ್ತೇನೆ ಎಂಬ ಭರವಸೆ ನೀಡಿ ಆರೋಪಿಗಳು ದಿನಾಂಕ 22.07.2024 ರಂದು ಸಂತ್ರಸ್ತೆಯಿಂದ 10 ಲಕ್ಷ ರೂಪಾಯಿ ಪಡೆದು ದಾಖಲೆಗಳನ್ನು ಬಹಳ ಸಮಯದ ಬಳಿಕ ಸರಿಪಡಿಸಿ ಕೊಡದೆ ಇದ್ದಾಗ ಸಂತ್ರಸ್ತೆಯ ತಮ್ಮ ಅಬ್ದುಲ್ ಫತಾಹ್ ಆರೋಪಿಗಳಿಗೆ ಕರೆ ಮಾಡಿ ಕಟ್ಟಡದ ದಾಖಲೆಯನ್ನು ಸರಿ ಮಾಡಿ ಕೊಡಿ ಇಲ್ಲದಿದ್ದರೆ ಅಕ್ಕನಿಗೆ ಹಣ ವಾಪಸು ಕೊಡಿ ಎಂದು ಕೇಳಿಕೊಂಡರು. ಆದರೆ ಆರೋಪಿಗಳು ದಾಖಲೆಯನ್ನು ಸರಿ ಮಾಡಿ ಕೊಡುವುದಿಲ್ಲ ಹಾಗೂ ಹಣವನ್ನು ವಾಪಸು ಕೊಡುವುದಿಲ್ಲ. ನೀವು ಮಾಡುವುದನ್ನು ಮಾಡಿ. ನಾನು ನೋಡಿಕೊಳ್ಳುತ್ತೇನೆ ಎಂದು ಸಂತ್ರಸ್ತರಿಗೆ ಬೆದರಿಕೆ ಹಾಕಿದ್ದರು. ಬಳಿಕ ದಿನಾಂಕ 07.05.2025 ರಂದು ಬೆಳಿಗ್ಗೆ 08.15 ರ ಸಮಯದಲ್ಲಿ ಆರೋಪಿಗಳು ಫಿರ್ಯಾದಿದಾರರು ಮನೆಯಲ್ಲಿ ಇರುವ ಸಮಯದಲ್ಲಿ ಏಕಾಏಕಿ ಕಬ್ಬಿಣದ ರಾಡ್ ಹಿಡಿದುಕೊಂಡು ಮನೆಗೆ ನುಗ್ಗಿ ವಿಧವೆ ಮಹಿಳೆಗೆ ಅಶ್ಲೀಲವಾಗಿ ಬೈದು ಸಂತ್ರಸ್ತೆಯ ಬಟ್ಟೆಯನ್ನು ಎಳೆದು, ಕಾಲಿನಿಂದ ತುಳಿದು ಮಾನಭಂಗಕ್ಕೆ ಯತ್ನಿಸಿರುತ್ತಾರೆ. ತಡೆಯಲು ಬಂದ ಸಂತ್ರಸ್ತೆಯ ತಮ್ಮನಿಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆಯ ಬಗ್ಗೆ ದೂರು ದಾಖಲಾಗಿರುತ್ತದೆ.
ಕಳೆದ ಡಿಸಂಬರ್ ತಿಂಗಳಲ್ಲಿ ಇದೇ ಆರೋಪಿಗಳು ಬಿ ಮೂಡ ಗ್ರಾಮದ ಪರ್ಲಿಯಾದಲ್ಲಿ ಮನೆಯೊಳಗೆ ಇದೇ ರೀತಿ ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ನುಗ್ಗಿ ಗರ್ಭಿಣಿ ಹಾಗೂ ಮನೆಯವರಿಗೆ ಹಲ್ಲೆ ದೌರ್ಜನ್ಯ ನಡೆಸಿರುತ್ತಾರೆ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ದೂರುದಾರರ ವಿರುದ್ಧವೆ ಸುಳ್ಳು ದೂರು ದಾಖಲಾಗುವಂತೆ ಮಾಡಿ ಸಂತ್ರಸ್ತ ವ್ಯಕ್ತಿ ಜೈಲಿನಲ್ಲಿ ಕಳೆಯುವಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಆರೋಪಿಗಳನ್ನು ಬಂಧಿಸಿ ಬಳಿಕ ದೂರು ನೀಡಿದ ಸಂತ್ರಸ್ತನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಕಾರಣ ಆರೋಪಿಗಳು ತಮ್ಮ ಗೂಂಡಾಗಿರಿಯನ್ನು ಪುನರಾವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅದಲ್ಲದೇ ಗಾಂಜಾ ವ್ಯಸನಿಗಳಾಗಿರುವ ಇವರು ತಂಡ ಕಟ್ಟಿಕೊಂಡು ಅಲ್ಲಲ್ಲಿ ಗೂಂಡಾಗಿರಿ, ಹಫ್ತಾ ವಸೂಲಿ ಮತ್ತು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೂ ಪೋಲಿಸ್ ಇಲಾಖೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಇರುವುದು ಇಲಾಖಾ ಅಧಿಕಾರಿಗಳು ರಾಜಕೀಯ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂದು ಸಾರ್ವಜನಿಕರು ಸಂಶಯಪಡುವಂತಾಗಿದೆ. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಇಂತಹ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.