ಕಡಬ: ಇಲ್ಲಿನ ವೃದ್ದ ದಂಪತಿಗಳ ಮನೆ ದ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದೌರ್ಜನ್ಯವನ್ನು ಖಂಡಿಸಿ ನ.20 ಬುಧವಾರದಂದು ಕಡಬ ತಹಶೀಲ್ದಾರ್ ಕಚೇರಿಯ ಮುಂದೆ ಸಮಾನ ಮನಸ್ಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾಪಿನ ಬಾಗಿಲು ಎಂಬಲ್ಲಿನ ವೃದ್ದ ದಂಪತಿಗಳ ಮನೆಯನ್ನು ದ್ವಂಸ ಮಾಡಲಾಗಿದೆ.
ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಿವಾಗಿದ್ದು, ಸಾಮಾಜಿಕ ಹೋರಾಟಗಾರ, ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ., ನ್ಯಾಯವಾದಿ ಬಿ.ಎಂ.ಭಟ್, ಕೆ.ಆರ್.ಎಸ್. ಪಕ್ಷದ ವೇಣುಗೋಪಾಲ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆ ಬದಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ವೃದ್ದ ದಂಪತಿಗಳು ನಜ್ಜುಗುಜ್ಜಾದ ಪಾತ್ರೆ ಪಗಡೆಗಳ ಜೊತೆ ಆಗಮಿಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮನೆ ಕಳೆದುಕೊಂಡ ವಯಸ್ಸಾದ ದಂಪತಿಗಳು ತಮಗೆ ಜೀವ ಬೇಡ ಎಂದು ನೆಲದಲ್ಲಿ ಒದ್ದಾಡಿದ್ದು, ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಕಂಡು ಬಂತು ಎನ್ನಲಾಗಿದೆ.
ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಡಬ ಠಾಣಾ ಎಸ್.ಐ. ಅಭಿನಂದನ್ ಹಾಗೂ ನೆರೆಯ ಠಾಣೆಗಳ ಪೊಲೀಸರು ಬಂದೋ ಬಸ್ತ್ ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.