ಬೆಂಗಳೂರು: ರಾಜ್ಯದ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ.
ಒಟ್ಟು 531 ಗ್ರಾಮ ಪಂಚಾಯತ್ ಗಳ 641 ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ.
ನವೆಂಬರ್ 12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನವೆಂಬರ್ 23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳ 26 ಗ್ರಾಮ ಪಂಚಾಯತ್ ಗಳಲ್ಲಿ ತೆರವಾಗಿರುವ 30 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ, ಕೆವೆಟ್ಟು, ಇಳಂತಿಲ ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಗಳಿಗೆ, ಮಂಗಳೂರು ತಾಲೂಕಿನ ಗಂಜಿಮಠ, ಅಡ್ಯಾರ್, ಜೋಕಟ್ಟೆ, ನೀರುಮಾರ್ಗ ಗ್ರಾಮ ಪಂಚಾಯತ್ ನ ತಲಾ ಒಂದು ಸ್ಥಾನಗಳಿಗೆ ಮತ್ತು ಮೂಡುಶೆಡ್ಡೆ ಗ್ರಾಮ ಪಂಚಾಯತ್ ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನ ಮೂರು ಸ್ಥಾನಗಳಿಗೆ, ಮಂಚಿ, ಪೆರ್ನೆ, ಚೆನ್ನೈತ್ತೋಡಿ, ಸಜಿಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಕ್ಕೆ ಮತ್ತು ಪಂಜಿಕಲ್ಲು ಗ್ರಾಮ ಪಂಚಾಯತ್ ನ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಮಂಡೆಕೋಲು, ನೆಲ್ಲೂರು ಕೆಮ್ರಾಜೆ, ಉಳ್ಳಾಲ ತಾಲೂಕಿನ ಮುನ್ನೂರು, ಕಡಬ ತಾಲೂಕಿನ ಸುಬ್ರಹ್ಮಣ್ಯ, ಕಟ್ರುಪ್ಪಾಡಿ, ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ, ಮೂಲ್ಕಿ ತಾಲೂಕಿನ ಹಳೆಯಂಗಡಿ ಮತ್ತು ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳ ಎಂಟು ಗ್ರಾಮ ಪಂಚಾಯತ್ ಗಳ ಹತ್ತು ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ಕೆರ್ವಾಶೆ ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಕ್ಕೆ ನೀರೆ ಗ್ರಾಮ ಪಂಚಾಯತ್ ನ ಮೂರು ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದೆ.ಉಡುಪಿ ತಾಲೂಕಿನ ಬೊಮ್ಮರಬೆಟ್ಟು, ಕುಂದಾಪುರ ತಾಲೂಕಿನ ಅಮಾಸೆಬೈಲು ಮತ್ತು ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಆಯಾ ತಾಲೂಕು ಕೇಂದ್ರಗಳಲ್ಲಿ ನವೆಂಬರ್ 26 ರಂದು ಬೆಳಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 6 ರಿಂದ 26 ರವರೆಗೆ ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.