ಪುತ್ತೂರು: ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ಬಸ್ ಸೌಕರ್ಯ ವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟಪಡುತ್ತಿರು ವುದನ್ನು ಕೆಎಸ್ಆರ್ಟಿಸಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಬಸ್ ಸೌಕರ್ಯ ಒದಗಿಸ ಬೇಕು ಎನ್ನುವ ಆಗ್ರಹ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ಸರ್ವೆ ಗ್ರಾಮದ ಕಲ್ಪಣೆ, ರೆಂಜಲಾಡಿ, ಸೊರಕೆ ಪರಿಸರದ ವಿದ್ಯಾರ್ಥಿಗಳು ಬಸ್ ಸೌಕರ್ಯವಿಲ್ಲ ಕಾರಣದಿಂದ ಶಾಲಾ ಕಾಲೇಜುಗಳಿಗೆ ತೆರಳಲು ಪರದಾಟ ನಡೆಸುತ್ತಿದ್ದು ಹಲವು ವರ್ಷಗಳಿಂದ ಈ ಭಾಗಕ್ಕೆ ಬಸ್ ಬೇಕೆಂಬ ನಮ್ಮಬೇಡಿಕೆ ಇನ್ನೂ ಈಡೇರಿಲ್ಲ ಎಂದು ಹೇಳಿದರು.
ಸದಸ್ಯ ಬಾಬು ಕಲ್ಲಗುಡ್ಡೆ ಧ್ವನಿಗೂಡಿಸಿ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು. ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಬಸ್ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿಯವರು ಈ ಭಾಗಕ್ಕೆ ಬಸ್ ಸೌಕರ್ಯವನ್ನು ಒದಗಿಸಬೇಕು. ಸವಣೂರು, ಕಾಣಿಯೂರು, ಪುತ್ತೂರು ಕಡೆಗಳಲ್ಲಿರುವ ಶಾಲಾ ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗುತ್ತಿರುವುದರಿಂದ ಬೇರೆ ಕಡೆಗೆ ಹೋಗುವ ಬಸ್ನ್ನು ರೂಟ್ ಡೈವರ್ಟ್ ಮಾಡಿ ಕಲ್ಪಣೆ, ರೆಂಜಲಾಡಿಯಾಗಿ ಭಕ್ತಕೋಡಿ ಮಾರ್ಗದ ಮೂಲಕ ಪುತ್ತೂರಿಗೆ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಇತರ ಸದಸ್ಯರು ಧ್ವನಿಗೂಡಿಸಿದರು. ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಎಸ್,ಪಿಡಿಓ ಗೀತಾ ಬಿ.ಎಸ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.