ಕೊಡಗು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಕಣ್ಮರೆಯಾದ ಐವರಲ್ಲಿ, ಉಳಿದ ಇಬ್ಬರಿಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಲ್ಲಿ ಕಾರ್ಯಾಚರಣೆ ಕಷ್ಟಕರವೆನಿಸಿರುವ ಕಾರಣ ಶೋಧ ಕಾರ್ಯವನ್ನು ನಿನ್ನೆ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ.
ಬ್ರಹ್ಮಗಿರಿ ಬೆಟ್ಟ ಕುಸಿದು, ಘಟನೆಯಲ್ಲಿ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬದ ಐದು ಮಂದಿ ಕಣ್ಮರೆಯಾಗಿದ್ದರು. ಮೊದಲು ನಾರಾಯಣ ಆಚಾರ್ ಅವರ ಸಹೋದರನ ಮೃತದೇಹ ದೊರೆತಿತ್ತು. ಆನಂತರದ ದಿನಗಳಲ್ಲಿ ನಾರಾಯಣ ಆಚಾರ್, ಮತ್ತೊಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ಎರಡು ಮೃತದೇಹಗಳ ಪತ್ತೆಗಾಗಿ ಎನ್ ಡಿಆರ್ ಎಫ್ ಸಿಬ್ಬಂದಿ ನಿರಂತರ ಶೋಧ ಕಾರ್ಯದಲ್ಲಿ ತೊಡಗಿದ್ದರು. ಆದರೆ ಬೆಟ್ಟ ಕುಸಿದು 16 ದಿನವಾದರೂ ಸುಳಿವು ಸಿಕ್ಕಿಲ್ಲ.
ಹೀಗಾಗಿ ಶೋಧ ಕಾರ್ಯವನ್ನು ಸ್ಥಗಿತ ಮಾಡಲಾಗಿದೆ. ಮಳೆ ಹಾಗೂ ಮಂಜಿನ ವಾತಾವರಣದಲ್ಲಿ ಕಾರ್ಯಾಚರಣೆ ಸಹ ಕಷ್ಟಕರವಾಗಿದೆ. ನಾರಾಣಯಣ ಆಚಾರ್ ಅವರ ಪತ್ನಿ ಶಾಂತ ಹಾಗೂ ಶ್ರೀನಿವಾಸ್ ಅವರ ಸುಳಿವು ಸಿಗಬೇಕಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಲು ಪತ್ರ ಬರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.