ಕಡಬ: ಕಾಣಿಯೂರು ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ (14) ಎಂದಿನಂತೆ ಶಾಲೆಗೆಂದು ಮನೆಯಿಂದ ಹೊರಟವನು ನಾಪತ್ತೆಯಾಗಿದ್ದನು.
ಪಂಜದ ಲೋಕನಾಥ್ ಎಂಬವರ ಮಗ ಶ್ರೇಯಸ್ ಜ.23ರಂದು ಬೆಳಿಗ್ಗೆ ಮನೆಯಿಂದ ಶಾಲೆಗೆಂದು ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಂಜದ ಮನೆಯಿಂದ ಕಾಣಿಯೂರು ಶಾಲೆಗೆ ಬಸ್ಸಿನಲ್ಲಿ ಬರುವ ಶ್ರೇಯಸ್ ಬೆಳಂದೂರುವರೆಗಿನ ಬಸ್ಪಾಸ್ ಹೊಂದಿದ್ದ. ಬೆಳಂದೂರಿನಿಂದ ಪುತ್ತೂರಿಗೆ ತೆರಳಿ ಶ್ರೇಯಸ್ ಮಂಗಳೂರಿಗೆ ಪ್ರಯಾಣ ಮುಂದುವರೆಸಿದ್ದಾನೆ. ಶಾಲೆಗೆ ಹಾಜರಾಗದೇ ಇದ್ದ ಕಾರಣ ಶಾಲೆಯಿಂದ ಶ್ರೇಯಸ್ ಮನೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು.
ಈ ವೇಳೆ ಬಾಲಕ ಶಾಲೆಗೆ ಹೋಗದೆ ನಾಪತ್ತೆಯಾಗಿರುವುದು ಹೆತ್ತವರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವರ್ತರಾದ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿ ಶ್ರೇಯಸ್ ಹುಡುಕಾಟ ನಡೆಸಿದ್ದಾರೆ. ಸದ್ಯ ಮಂಗಳೂರಿನ ಬಂದರು ಪ್ರದೇಶದಲ್ಲಿ ಈತ ಪತ್ತೆಯಾಗಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ.ಆದರೆ ಆತ ಯಾಕೆ ಈ ರೀತಿ ಮಾಡಿದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.