ಉಪ್ಪಿನಂಗಡಿ: ಬೈಕ್ ಮೇಲೆ ಬೊಲೆರೋ ಪಲ್ಟಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಬಜತ್ತೂರು ಗ್ರಾಮದ ಕೆಮ್ಮಾರದ ಓಡ್ಲದಲ್ಲಿ ಸೋಮವಾರ ನಡೆದಿದೆ.ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ, ಎಲೆಕ್ಟ್ರಿಷಿಯನ್ ಕೊರಗಪ್ಪ ಗೌಡ (58) ಮೃತ ದುರ್ದೈವಿ.
ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ಕಡಬ ಕಡೆಯಿಂದ ಕೃಷ್ಣಪ್ಪ ನಾಯ್ಕ ಅವರು ಬೊಲೆರೋವನ್ನು ಚಲಾಯಿಸಿಕೊಂಡು ಬಂದು ಓಡ್ಲ ಎಂಬಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ, ಒಮ್ಮೆಲೇ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭ ಬೊಲೆರೋ ವಾಹನ ಸ್ಕಿಡ್ ಆಗಿ ಪಲ್ಟಿ ಹೊಡೆದಿದೆ.ಆಗ ಉಪ್ಪಿನಂಗಡಿ ಕಡೆಯಿಂದ ಕೆಮ್ಮಾರ ಕಡೆ ಕೊರಗಪ್ಪ ಗೌಡರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ನ ಮೇಲೆ ಬೊಲೆರೋ ವಾಹನ ಬಿದ್ದಿದೆ.
ಆಗ ಬೈಕ್ ಮತ್ತು ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.