ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ-13’ ಕಾರ್ಯಕ್ರಮ ಸೆಪ್ಟೆಂಬರ್ 6ರಿಂದ ಆರಂಭವಾಗುವುದು ಅನುಮಾನ ಎನ್ನುವ ವರದಿಗಳು ಬಂದಿವೆ. ಬಿಡದಿ ಬಳಿಯಿರುವ ‘ಜಾಲಿವುಡ್ ಸ್ಟುಡಿಯೋ’ದಲ್ಲಿ ಬಿಗ್ ಬಾಸ್ ಸೆಟ್ ನಿರ್ಮಿಸಲಾಗಿದ್ದು, ಪರಿಸರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಆಯೋಜಕರಿಗೆ ಬಿಗ್ ಶಾಕ್ ನೀಡಿದ್ದಾರೆ.
ಜಾಲಿವುಡ್ ಸ್ಟುಡಿಯೋ ಈ ಬಾರಿ ಬಿಗ್ ಬಾಸ್ ಶೂಟಿಂಗ್ ನಡೆಸಲು ಅಗತ್ಯ ಅನುಮತಿ ಪಡೆದುಕೊಂಡಿಲ್ಲ. ಜೊತೆಗೆ ಕಳೆದ ವರ್ಷದ ದಂಡವನ್ನು ಪಾವತಿಸದಿರುವುದು, ಎಸ್ಟಿಪಿ (STP) ಅಳವಡಿಸದಿರುವುದು ಸೇರಿದಂತೆ ಹಲವು ಪರಿಸರ ಲೋಪಗಳನ್ನು ಎಸಗಿದೆ. ಈ ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಪರಿಸರ ಮಂಡಳಿಯಿಂದ ಅನುಮತಿ ಪಡೆಯದಿದ್ದರೆ ಬಿಗ್ ಬಾಸ್ ಶೋ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿಯೂ ಇದೇ ರೀತಿಯ ಕಾನೂನು ತೊಡಕುಗಳಿಂದ ಪ್ರಸಾರಕ್ಕೆ ಅಡಚಣೆಯಾಗಿತ್ತು. ಇದೀಗ ವಾಹಿನಿ ಹಾಗೂ ಆಯೋಜಕರು ತಕ್ಷಣವೇ ನಿಯಮಗಳನ್ನು ಪೂರೈಸಿ ಅನುಮತಿ ಪಡೆಯದಿದ್ದರೆ, ನಿಗದಿತ ದಿನಾಂಕದಂದು ಶೋ ಆರಂಭವಾಗುವುದು ಕಷ್ಟವೆನ್ನಲಾಗಿದೆ.


