ಬೆಳ್ತಂಗಡಿ : ಜಮಾಲ್ ಕರಾಯ ಎಂಬವರು ತಮ್ಮ ಅಗತ್ಯ ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರು ರಸ್ತೆ ಬದಿ ನೋವಿನಿಂದ ಚಡಪಡಿಸುತ್ತಿದ್ದನ್ನು ಗಮನಿಸಿ ಅವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಕಾರಿನಲ್ಲೇ ಆಕೆಗೆ ಹೆರಿಗೆಯಾದ ಘಟನೆ ಜು 1 ವೈದ್ಯರ ದಿನದಂದು ನಡೆದಿದೆ.
ಜಮಾಲ್ ಅವರ ಕಾರಿನಲ್ಲೇ ತನ್ನ ಚೊಚ್ಚಲ ಗಂಡು ಮಗುವಿಗೆ ಜನ್ಮ ನೀಡಿರುವ ಮಹಿಳೆ ಮತ್ತು ಅವರ ಮಗು ಇಬ್ಬರೂ ಆರೋಗ್ಯವಾಗಿದ್ದು ಇದೀಗ ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಪ್ರಸವ ನಂತರದ ಆರೈಕೆಯಲ್ಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಇಕ್ಬಾಲ್ ಅವರ ಪತ್ನಿ ತುಂಬು ಗರ್ಭಿಣಿ ಸಫಿಯಾ ಅಳದಂಗಡಿ ಅವರು ತೀವ್ರವಾದ ಹೆರಿಗೆ ನೋವಿನೊಂದಿಗೆ ಅಳದಂಗಡಿ ರಸ್ತೆ ಬದಿ ನಿಂತುಕೊಂಡಿದ್ದರು. ಇದನ್ನು ಗಮನಿಸಿದ ಜಮಾಲ್ ಅವರು ತನ್ನ ಕಾರನ್ನು ತಿರುಗಿಸಿ ಬಂದು ವಿಚಾರಿಸಿದರು. ದಂಪತಿಯ ಸಂಕಷ್ಟ ಅರಿತ ಅವರು ತನ್ನ ಪ್ರಯಾಣ ಮೊಟಕುಗೊಳಿಸಿ ತಕ್ಷಣ ಮಹಿಳೆಯನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಯತ್ತ ಕರೆದುಕೊಂಡು ಹೋಗುತ್ತಿದ್ದರು. ಆ ವೇಳೆ ಅವರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಸವದ ವೇಳೆ ಪತಿ ಇಕ್ಬಾಲ್ ಅವರು ಮತ್ತು ಜಮಾಲ್ ಅವರು ಮಹಿಳೆಗೆ ತುರ್ತು ಸ್ಪಂದಿಸಿದ್ದು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಒಂದು ವೇಳೆ ಜಮಾಲ್ ಆ ಸಂದರ್ಭದಲ್ಲಿ ಬಾರದೇ ಹೋಗುತ್ತಿದ್ದರೆ ಅನಾಹುತ ಆಗುವ ಸಂಭವವಿತ್ತು. ಅಂತೂ ವೈದ್ಯರ ದಿನದಂದು ಸಫಿಯಾ ಪಾಲಿಗೆ ಜಮಾಲ್ ಅವರೇ ವೈದ್ಯರಂತೆ ಬಂದು ಪ್ರಾಣ ಕಾಪಾಡಿದ್ದಂತೂ ಸತ್ಯ.ಇದೀಗ ಜಮಾಲ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.