ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ಉದಯೋನ್ಮುಖ ಆಟಗಾರ ನಿಷ್ಕ್ ಹರೀಶ್ ಸಾಲಿಯಾನ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್ಶಿಪ್ 2026ರ 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದಿದ್ದಾರೆ.
ಡೆಹ್ರಾಡೂನ್ನಲ್ಲಿ ಭಾನುವಾರ ಮುಕ್ತಾಯಗೊಂಡ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ರನ್ನರ್-ಅಪ್ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. ಈ ವಿಭಾಗದಲ್ಲಿ ಚಂಡೀಗಢ ಚಿನ್ನದ ಪದಕ ಗೆದ್ದರೆ, ರಾಜಸ್ಥಾನ ಕಂಚಿನ ಪದಕ ಪಡೆದುಕೊಂಡಿತು.

ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಸಿದ್ಧತೆಯ ಭಾಗವಾಗಿ ನಿಷ್ಕ್ ಕರ್ನಾಟಕ ತಂಡದೊಂದಿಗೆ 2026ರ ಏಪ್ರಿಲ್ ತಿಂಗಳಲ್ಲಿ ಡೆಹ್ರಾಡೂನ್ನಲ್ಲಿ ನಡೆದ 10 ದಿನಗಳ ತೀವ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಯುವ ಆಟಗಾರರ ಕಠಿಣ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆಯೇ ಕರ್ನಾಟಕದ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ತಂಡಕ್ಕೆ ಮುಖ್ಯ ಕೋಚ್ ಅರುಣ್ ಮಾರ್ಗದರ್ಶನ ನೀಡಿದ್ದು, ಸಹಾಯಕ ಕೋಚ್ಗಳಾದ ಶೇಖ್ ಅಬ್ದುಲ್ಲಾ, ಆರ್ಯನ್ ವಿಜಯತ್ ಹಾಗೂ ಅಶ್ವಿನ್ ಅವರ ಅಮೂಲ್ಯ ಸಹಕಾರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ಪ್ರಸ್ತುತ ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಷ್ಕ್, ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ನಿರಂತರವಾಗಿ ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಈ ಸಾಧನೆ ಅವರ ಕುಟುಂಬ, ಶಾಲೆ, ತರಬೇತುದಾರರು ಹಾಗೂ ಸಮಸ್ತ ಸಮಾಜಕ್ಕೆ ಅಪಾರ ಹೆಮ್ಮೆ ತಂದಿದೆ.

ನಿಷ್ಕ್ ಅವರು ಕುತ್ಲೂರು ಮೂಲದ ಹರೀಶ್ ಡಾಕಯ್ಯ ಮತ್ತು ಬಿನಾಕಾ ಹರೀಶ್ ಅವರ ಪುತ್ರರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರಗತಿಪರ ಕೃಷಿಕ ಡಾಕಯ್ಯ ಪೂಜಾರಿ ಅವರ ಮೊಮ್ಮಗ.


