ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ವರ್ಷಧಾರೆ ಆಗುತ್ತಿರುವ ಪರಿಣಾಮ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನಿಡಿಗಲ್ ಎಂಬಲ್ಲಿ ಮಳೆಯ ಅಬ್ಬರಕ್ಕೆ ಮನೆಯ ಗೋಡೆ ಕುಸಿದಿರುವ ಘಟನೆ ಜು.16ರಂದು (ಇಂದು) ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ಜೀನದತ್ತ ಇಂದ್ರ ಎಂಬವರ ಮನೆಯ ಹಿಂಬದಿಯ ಗೋಡೆ ಮತ್ತು ಮೇಲ್ಛಾವಣಿ ಮುಂಜಾನೆ 6 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಈ ಸಂದರ್ಭದಲ್ಲಿ ಮನೆಯ ಹಿಂಬದಿ ಯಾರು ಇಲ್ಲದ ಕಾರಣ ಭಾರಿ ಪ್ರಮಾಣದ ಅನಾಹುತ ತಪ್ಪಿದೆ.ನಡೆದ ಘಟನೆಯ ಮಾಹಿತಿ ತಿಳಿದು ಕಲ್ಮಂಜ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸರೋಜಿನಿ, ಗ್ರಾಮ ಆಡಳಿತ ಅಧಿಕಾರಿಯಾದ ರಣಿತಾ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ರುಕೇಶ್ ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಧಾರಾಕಾರ ಮಳೆಯಿಂದ ಹಳೆ ಮನೆ ಕುಸಿದಿದ್ದು, ಇದಕ್ಕೆ ಸರಕಾರ ಸೂಕ್ತ ಪರಿಹಾರ ಕೊಟ್ಟು ನೆರವಾಗಬೇಕು ಎಂದು ಮನೆಯವರು ಕೇಳಿಕೊಂಡಿದ್ದಾರೆ. ಹಾಗೆಯೇ ಮನೆ ಮಂದಿಗೆ ಯಾವುದೇ ರೀತಿ ಹಾನಿ ಆಗಿಲ್ಲ ಎಂದು ಮನೆಯ ಮಾಲೀಕರು ಸ್ಪಷ್ಟ ಪಡಿಸಿದ್ದಾರೆ.