ಬೆಳ್ತಂಗಡಿ :”ಕಳೆಂಜ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂಬವರು ವಿಜಯೋತ್ಸವದ ಸಂಭ್ರಮಾಚರಣೆ ನೆಪದಲ್ಲಿ ಅದೇ ಗ್ರಾಮದ ಕಜೆ ಮನೆಯ ಕುಶಾಲಪ್ಪ ಗೌಡರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಡುಮದ್ದನ್ನು ಸಿಡಿಸಿ ಮನೆಯಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವನ್ನು ನಡೆಸಿರುತ್ತಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ತನ್ನ ಕುಟುಂಬದ ರಕ್ಷಣೆಗಾಗಿ ಕುಶಾಲಪ್ಪಗೌಡರು ಪ್ರತಿರೋಧವನ್ನು ತೋರಿರುತ್ತಾರೆ.ಆಗ ನಡೆದ ಘಟನೆಯಲ್ಲಿ ಗಾಯಗಳಾಗಿರುತ್ತವೆ” ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಹೇಳಿದರು.
ಅವರು ಗುರುವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಕಾನೂನನ್ನು ಮೀರಿ ಕುಶಾಲಪ್ಪ ಗೌಡರ ಆವರಣದ ಒಳಗೆ ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆ ಮಾಡಿರುವುದನ್ನು, ಹಾಗೂ ಅಪ್ರಾಪ್ತ ಹೆಣ್ಣು ಮಗಳಿಗೆ ದೌರ್ಜನ್ಯ ಎಸಗಿರುವುದನ್ನು ಖಂಡಿಸುತ್ತೇವೆ. ಈ ಸಮಯ ಪರಸ್ಪರ ಹಲ್ಲೆ ನಡೆದಿರುವುದು ವಿಷಾದನೀಯ.ಆದರೆ ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಬಳಸಿಕೊಂಡು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೆಸರನ್ನು ಎಳೆದು ತಂದಿರುವುದು ದುರದೃಷ್ಟಕರ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ತುರ್ತು ಕಾರ್ಯ ಪ್ರವೃತ್ತವಾಗಿ ತಪ್ಪಿತಸ್ಥರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಗಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ” ಎಂದರು
ಬೆಳ್ತಂಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರು ಅವುಗಳಲ್ಲಿ ರಕ್ಷಿತಾ ಶಿವರಾಂ ಹೆಸರನ್ನು ಎಳೆದು ತರುತ್ತಿರುವುದು ಬಿಜೆಪಿಗೆ ಚಾಳಿಯಾಗಿದೆ ಬಿಜೆಪಿ ಮಂಡಲ ಅಧ್ಯಕ್ಷರು ಕಾನೂನಿನ ಪರಿಜ್ಞಾನವಿಲ್ಲದೆ ಮತ್ತು ವಾಸ್ತವಿಕತೆ ಅರಿತು ಕೊಳ್ಳದೆ ಸಾರ್ವಜನಿಕರಾಗಿ ಮಾತನಾಡಿರುವುದು ಖಂಡನೀಯ” ಎಂದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ನಗರ ಅಧ್ಯಕ್ಷ ಸತೀಶ್ ಕೆ. ಬಂಗೇರ ಕಾಶಿಪಟ್ಣ,ನಗರ ಎಸ್.ಟಿ. ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ,ಗ್ರಾಮೀಣ ಎಸ್.ಸಿ.ಘಟಕದ
ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಅಕ್ರಮ ಸಕ್ರಮ ಸದಸ್ಯ ಶ್ರೀಧರ್ ಕಳೆಂಜ, ತಾಲೂಕು ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಜೈಸನ್ ಪಟ್ಟೇರಿ, ಪಕ್ಷದ ಮುಖಂಡರಾದ ಬಿ.ಕೆ. ವಸಂತ್, ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು