ಬಂಟ್ವಾಳ: ಎರಡು ವಾರಗಳ ಹಿಂದೆ ತಾಲೂಕಿನ ಪಣೋಲಿಬೈಲು ಪರಿಸರದಲ್ಲಿ ಮಹಿಳೆಯ ಕರಿಮಣಿ ಸರ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಬಂಟ್ವಾಳ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಏನಿದು ಪ್ರಕರಣ:
ದಿನಾಂಕ: 08-09-2021 ರಂದು ಮಧ್ಯಾಹ್ನ ಸಮಯ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದು ಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣದ ಕಾರ್ಯಚರಣೆ ನಡೆಸಿದ ಪೊಲೀಸರು ಆರ್ಯಾಪು ನಿವಾಸಿಗಳಾದ ರೋಹಿತ್ (22 ವ), ಮತ್ತು ಲೋಹಿತ್ ಪಿ.ಆರ್ ಅಲಿಯಾಸ್ ಸಚಿನ್ ಸಚ್ಚು( 20 ವ) ರನ್ನು ದಿನಾಂಕ: 19-09-2021 ರಂದು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ ಅವರುಗಳು ಸುಲಿಗೆ ಮಾಡಿದ ಮಾಂಗಲ್ಯ ಸರವನ್ನು ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ ಅಪಾಚಿ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು ಮತ್ತು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮಾನ್ಯ ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿಗಳಿಗೆ ಬಂಟ್ವಾಳ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿಗಳ ಪರವಾಗಿ ಚಾಣಕ್ಯ ಲಾ ಚೇಂಬರ್ಸ್ ಪುತ್ತೂರು ಇಲ್ಲಿನ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್ ಹಾಗೂ ವಿಮಲೇಶ್ ಸಿಂಗಾರಕೋಡಿ ವಾದಿಸಿದರು.