ಮಂಗಳೂರು: ಬಾಂಗ್ಲಾದೇಶದಲ್ಲಿ ಧಾರ್ಮಿಕ ಮುಖಂಡ ಚಿನ್ಮಯ ಕೃಷ್ಣದಾಸ ಪ್ರಭು ಅವರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆಗೊಳಿಸಬೇಕು ಹಾಗೂ ಅಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ನ.29ರ ಶುಕ್ರವಾರದಂದು ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಹೆಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಅವರು, ‘ಇಸ್ಕಾನ್ ನ ಸ್ವಾಮಿಗಳನ್ನು ಏನೂ ಕಾರಣ ಕೊಡದೆ ಬಾಂಗ್ಲಾದಲ್ಲಿ ಬಂಧಿಸಿದ್ದಾರೆ. ಜಗತ್ತಿನಲ್ಲಿ ಶಾಂತಿಗಾಗಿ ಹುಟ್ಟಿದ ಇಸ್ಕಾನ್ ಸಂಸ್ಥೆ ಜಗತ್ತಿನ ಜನರ ಪ್ರೀತಿ ಗಳಿಸಿ, ಬಡವರ ಸೇವೆ ಮಾಡುತ್ತಿದೆ. ಇದೆಲ್ಲವೂ ಕೂಡ ಹಿಂದೂಗಳನ್ನು ಬಾಂಗ್ಲಾದಿಂದ ಹೊರ ಹಾಕುವ ಷಡ್ಯಂತ್ರವಾಗಿದೆ.’ ಎಂದರು.
‘ಬಾಂಗ್ಲಾದ ಹಿಂದೂಗಳು ಶಾಂತಿಯಿಂದ ಬದುಕಲು ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಬಾಂಗ್ಲಾ ಸರಕಾರವೇ ಹೊಣೆಯಾಗುತ್ತದೆ. ಬಂಧಿತ ಹಿಂದೂಗಳನ್ನು ಭೇಷರತ್ತಾಗಿ ಬಿಡುಗಡೆ ಗೊಳಿಸಬೇಕು,’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಇಸ್ಕಾನ್ ನ ಪ್ರೇಮಭಕ್ತಿ ಪ್ರಭು , ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಇಸ್ಕಾನ್ ನ ಸಚ್ಚಿದಾನಂದ ಅದ್ವೈತ ದಾಸ, ಪ್ರಮುಖರಾದ ಗೋಪಾಲ್ ಕುತ್ತಾರ್, ಎಚ್. ಕೆ ಪುರುಷೋತ್ತಮ್, ಕೃಷ್ಣ ಪ್ರಸನ್ನ, ಶಿವಾನಂದ ಮೆಂಡನ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ಭುಜಂಗ ಕುಲಾಲ್ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್, ಗಣೇಶ್ ಪೊದುವಾಳ್, ಶಕೀಲಾ ಕಾವಾ, ಪ್ರೇಮಾನಂದ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.