ಮಂಗಳೂರು/ಉಡುಪಿ: ಶನಿವಾರ ಮತ್ತು ರವಿವಾರ ಕುಕ್ಕೆ , ಧರ್ಮಸ್ಥಳ, ಕೊಲ್ಲೂರು, ಸುಬ್ರಮಣ್ಯ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ವಿವಿಧ ದೇಗುಲಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು,ಕೋವಿಡ್ ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದಂತೆ ಕರಾವಳಿಯ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲಾರಂಭಿಸಿದ್ದಾರೆ.
ಬೇರೆ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿರುವುದಲ್ಲದೆ, ವಿವಿಧ ಸೇವೆಗಳನ್ನು ನೆರವೇರಿಸುತ್ತಿದ್ದಾರೆ. ಸುಬ್ರಹ್ಮಣ್ಯ ಪೇಟೆಯಲ್ಲೂ ಅಧಿಕ ವಾಹನ ಸಂಚಾರ ಹಾಗೂ ಜನ ದಟ್ಟನೆ ಕಂಡುಬಂದಿದೆ.
ಇನ್ನು ಶ್ರೀಕೃಷ್ಣ ಮಠಕ್ಕೆ ರವಿವಾರ ಸುಮಾರು 5,000 ಭಕ್ತರು ಭೇಟಿ ನೀಡಿದ್ದು, ಸುಮಾರು 3,000 ಭಕ್ತರು ಭೋಜನ ಸ್ವೀಕರಿಸಿದ್ದಾರೆ. ಲಾಕ್ಡೌನ್ ತೆರವಾದ ಬಳಿಕ ಭಕ್ತರ ಸಂಖ್ಯೆ ಏರುಗತಿಯಲ್ಲಿದೆ.
ಕಳೆದ ಎರಡು ದಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಶ್ರೀ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದು, ನೇತ್ರಾವತಿ ಸ್ನಾನಘಟ್ಟ, ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದವು . ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ಸುರ್ಯ ಸದಾಶಿವರುದ್ರ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಸಮರ್ಪಿಸಿದರು. ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇಗುಲಕ್ಕೆ ಸಾಧಾರಣ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಕೋವಿಡ್ ಮತ್ತು ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ವಿರಳವಾಗಿದ್ದ ಬೀಚ್ಗಳಲ್ಲಿ ಈಗ ವಾರಾಂತ್ಯದಲ್ಲಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.ಮಲ್ಪೆ ಬೀಚ್ಗೆ ಎರಡು ವಾರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಗಾಂಧಿ ಜಯಂತಿಯ ರಜೆಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಬೆಳಗ್ಗಿನಿಂದಲೇ ಬೀಚ್ ಕಿಕ್ಕಿರಿದು ತುಂಬಿತ್ತು. ಸಂಜೆಯಾಗುತ್ತಲೇ ಸ್ಥಳೀಯರೂ ಸೇರಿ ಜನ ಜಂಗುಳಿಯಾಗುತ್ತಿದೆ. ಸಂಚಾರ ದಟ್ಟಣೆ ಸಮಸ್ಯೆ, ಬೀಚ್ನ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಆರಂಭವಾಗಿದೆ.
ವಾರದ ರಜಾ ದಿನಗಳಲ್ಲಿ ಪಣಂಬೂರು, ಸುರತ್ಕಲ್, ತಣ್ಣೀರುಬಾವಿ ಬೀಚ್ನತ್ತಾ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಜೀವ ರಕ್ಷಕರನ್ನು ನೇಮಿಸಬೇಕಿದೆ.