Saturday, June 28, 2025
Homeಕರಾವಳಿಬೆಳ್ತಂಗಡಿ: ಧರ್ಮಸ್ಥಳ ದರೋಡೆ ಪ್ರಕರಣದಲ್ಲಿ ಓರ್ವ ಆರೋಪಿಗೆ ಜಾಮೀನು

ಬೆಳ್ತಂಗಡಿ: ಧರ್ಮಸ್ಥಳ ದರೋಡೆ ಪ್ರಕರಣದಲ್ಲಿ ಓರ್ವ ಆರೋಪಿಗೆ ಜಾಮೀನು

spot_img
- Advertisement -
- Advertisement -

ಬೆಳ್ತಂಗಡಿ : 2020 ರ ಜೂನ್ 26 ರಂದು ಉಜಿರೆಯ ಓಡಲ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ನಗ- ನಗದು ದರೋಡೆ ಮಾಡಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು ಇದರಲ್ಲಿ ಬಂಧಿತರಾಗಿರುವ ಓರ್ವ ಆರೋಪಿಯಾದ ರಿಯಾಜ್ (40) ಎಂಬವರ ಪರವಾಗಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು. ಈ ಪ್ರಕರಣದಲ್ಲಿ ದಾಖಲಾಗಿರುವ ದರೋಡೆಗೆ ಸಂಬಂಧಿಸಿದ ಐಪಿಸಿ ಕಲಂ 448, 327, 506, 394  ಅಡಿಗಳಲ್ಲಿ ಆರೋಪಿ ರಿಯಾಜ್(40) ಎಂಬಾತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಆರೋಪಿ ಪರ ವಕೀಲರು ಮಾನ್ಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಈ ಪ್ರಕರಣವು ದೀರ್ಘಾವಧಿಯಲ್ಲಿ ಪತ್ತೆಯಾಗದ ಪ್ರಕರಣವಾಗಿದ್ದು  ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್ ಸಲ್ಲಿಕೆಯಾಗಿತ್ತು. ನಿರಪರಾಧಿಯಾಗಿದ್ದ ರಿಯಾಜ್ ಎಂಬಾತನನ್ನು  ಈ ಪ್ರಕರಣದಲ್ಲಿ ಅನಗತ್ಯ ಸಿಲುಕಿಸಲಾಗಿದೆ ಎಂದು ಆರೋಪಿ ಪರ ವಕೀಲರು  ನ್ಯಾಯಾಲಯಕ್ಕೆ ಕೋರಿಕೊಂಡಿದ್ದರು. ವಾದ ಪ್ರತಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿತನನ್ನು ಜೂ.1 ರಂದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.

ಪ್ರಕರಣದ ವಿವರ: ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಚ್ಚುತ ಭಟ್ ಎಂಬವರ ಮನೆಯಲ್ಲಿ 2020 ಜೂನ್ 26 ರಂದು ಮಧ್ಯ ರಾತ್ರಿ 2.30 ರಿಂದ 3.30 ರ ಮಧ್ಯೆ ಮನೆ ದರೋಡೆ ನಡೆದಿತ್ತು. ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಅಚ್ಚುತ ಭಟ್ ಅವರು ಎಚ್ಚೆತ್ತುಕೊಂಡು ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ಅವರನ್ನು ಸುತ್ತುವರಿದು ಕುತ್ತಿಗೆ ಅದುಮಿ ಹಿಡಿದಿದ್ದರು. ಈ ವೇಳೆ ಅವರು ಬೊಬ್ಬೆ ಹಾಕಿದಾಗ ಮನೆಯಲ್ಲಿದ್ದ ತನ್ನ ಸಹೋದರನ ಪತ್ನಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಏಕಾಏಕಿ ಇಬ್ಬರು ಮನೆಯ ಒಳಕ್ಕೆ ನುಗ್ಗಿದ್ದರು. ಮನೆಯಲ್ಲಿದ್ದ ಅವರ ತಾಯಿ ಮತ್ತು ತಮ್ಮನ ಪತ್ನಿ ಯನ್ನು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ಬಟ್ಟೆಯಿಂದ ಕೈಕಾಲು ಕಟ್ಟಿ ತಮ್ಮನ ಪತ್ನಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು. ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25 ಸಾವಿರ ವನ್ನು ತೆಗೆದುಕೊಂಡಿದ್ದರು. ತಮ್ಮನ ಪತ್ನಿಯ ಬ್ಯಾಗ್ ನಲ್ಲಿದ್ದ ಮಕ್ಕಳ 3 ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ಆಗಂತುಕರು ದರೋಡೆಗೈದಿದ್ದರು. ಅಲ್ಲದೇ ಅವರ ಮೊಬೈಲ್ ಮತ್ತು ತಮ್ಮನ‌ ಪತ್ನಿಯ 2 ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದರು. ಆರೋಪಿತರುಗಳು, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿ ಪರಾರಿಯಾಗಿದ್ದರು. 2020 ರಲ್ಲಿ ನಡೆದ ಈ‌ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಆಗದ್ದರಿಂದ ತನಿಖೆ ನಡೆಸಿದ್ದ ಪೊಲೀಸರು ,’ಇದೊಂದು ಪತ್ತೆಯಾಗದ ಪ್ರಕರಣ’ ಎಂದು  ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ  ಧರ್ಮಸ್ಥಳ ಪೊಲೀಸ್ ಠಾಣೆ ಯವರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಮೇ.22 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಆರೋಪಿಯ ಪರವಾಗಿ ಬೆಳ್ತಂಗಡಿ ಲೆಕ್ಸ್ ವಿಷನ್ ಲಾ ಚೇಂಬರ್ ನ ನ್ಯಾಯವಾದಿಗಳಾದ ನವಾಜ್ ಶರೀಫ್ ಎ, ಮಮ್ತಾಜ್ ಬೇಗಮ್, ಇರ್ಷಾದ್, ಸಪ್ನಾಜ್ ವಾದ ಮಂಡಿಸಿದ್ದರು

- Advertisement -
spot_img

Latest News

error: Content is protected !!