ಸುಬ್ರಮಣ್ಯ: ಕಾರುಗಳ ಮಧ್ಯೆ ಅಪಘಾತ, ಓರ್ವ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಕೈಕಂಬ-ಗೋಪಾಳಿ ಎಂಬಲ್ಲಿ ನಡೆದಿದೆ.
ಬೆಂಗಳೂರು ರಾಮನಗರದ ಯಲ್ಲಿಗಯ್ಯ (73) ಮೃತ ದುರ್ದೈವಿ. ಯಲ್ಲಿಗಯ್ಯ ಅವರ ಪುತ್ರ ಕಾರನ್ನು ಚಲಾಯಿಸುತ್ತಿದ್ದ ನವೀನ್ (29) ಮತ್ತು ನವೀನ್ ತಾಯಿ ದೈಯಮ್ಮ (52) ಗಾಯಗೊಂಡವರು.ಗೋಪಾಳಿ ಎಂಬಲ್ಲಿ ಇನ್ನೋವಾ ಕಾರು ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ಪಲ್ಟಿಯಾಗಿತ್ತು. ಸ್ವಿಫ್ಟ್ ಕಾರಿನಲ್ಲಿದ್ದವರು ಕುಕ್ಕೆ ದೇವಸ್ಥಾನಕ್ಕೆ ಬಂದು ಊರಿಗೆ ಹಿಂದಿರುಗುತ್ತಿದ್ದರು.
ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತಿಬ್ಬರನ್ನು ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಕಡಬ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಯಲ್ಲಿಗಯ್ಯ ಅವರು ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.