ನೆಲ್ಯಾಡಿ: ಯುವಕನೋರ್ವ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದ ಘಟನೆ ಗುಂಡ್ಯ ಹೊಳೆಯಲ್ಲಿ ಬುಧವಾರದಂದು ನಡೆದಿದೆ.
ಕಣ್ಮರೆಯಾದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಟೆಂಪೋದಲ್ಲಿ ಆಟೋಮೊಬೈಲ್ ಬಿಡಿಭಾಗಗಳ ಸಾಗಾಟ ಮಾಡುತ್ತಿದ್ದ ಸೀತಾರಾಮ್ ಹಾಗೂ ಅವರ ಜೊತೆಗಿದ್ದ ಇನ್ನೊಬ್ಬ ಯುವಕ ಗುಂಡ್ಯ ಸಮೀಪ ಹೆದ್ದಾರಿ ಬದಿ ಟೆಂಪೋ ನಿಲ್ಲಿಸಿ ಗುಂಡ್ಯ ಹೊಳೆಗೆ ಹೋಗಿದ್ದಾರೆ. ಈ ವೇಳೆ ಬಂಡೆಕಲ್ಲೊಂದರ ಮೇಲೆ ಇಬ್ಬರು ನಿಂತು ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ. ಮೊಬೈಲ್ನಲ್ಲಿ ಸೆಲ್ಸಿ ವಿಡಿಯೋ ತೆಗೆಯುತ್ತಿದ್ದ ವೇಳೆ ಸೀತಾರಾಮ್ ಬಂಡೆಕಲ್ಲಿನಿಂದ ಜಾರಿ ನದಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕಾಗಮಿಸಿ ನದಿ ನೀರಿನಲ್ಲಿ ನಾಪತ್ತೆಯಾಗಿರುವ ಯುವಕನಿಗಾಗಿ ಹೊಳೆಬದಿಯಲ್ಲಿ ರಾತ್ರಿ ತನಕ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
ನ.12 ರಂದು ಅಗ್ನಿಶಾಮಕದಳ, ಮುಳುಗು ತಜ್ಞರನ್ನು ಕರೆಸಿ ಶೋಧ ನಡೆಸಲು ನಿರ್ಧಾರಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ಕುಮಾರ್ ಕಾಂಬ್ಳೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.