ಸುಳ್ಯ : ಮಹಿಳೆಯೊಬ್ಬರು ಸೆ.11 ರಂದು ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದು, ಇಂದು ಮಧ್ಯಾಹ್ನ ಪಯಸ್ವಿನಿ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪೆರಾಜೆ ಕಲೆರ್ಪೆ ಎಂಬಲ್ಲಿ ನಡೆದಿದೆ.
ಮೃತರನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋಗಿದ್ದರು. ಆದರೆ ಎಷ್ಟೇ ಹೊತ್ತಾದರೂ ಮರಳಿ ಮನೆಗೆ ಬಾರದೇ ಇದ್ದುದರಿಂದ ಅಂದು ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು.ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ.
ಮರುದಿನ ಸುಳ್ಯ ಅಗ್ನಿಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರೂ ಸಂಜೆಯವರಗೆ ಮಹಿಳೆಯ ಶವ ಪತ್ತೆಯಾಗಲಿಲ್ಲ. ಸುಮಾರು ನಾಲ್ಕುದಿನದಿಂದ ಅಗ್ನಿಶಾಮಕ ದಳದವರೊಂದಿಗೆ ಮುಳುಗು ತಜ್ಞರ ತಂಡ ಬೆಳಿಗ್ಗೆಯಿಂದ ಹುಡುಕುತ್ತಿದ್ದು, ಇಂದು ಮಧ್ಯಾಹ್ನ ಪೆರಾಜೆ ಬಳಿಯ ಪೈಚಾರ್ ನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.