ಸುಳ್ಯ:ಇಲ್ಲಿನ ದುಗಲಡ್ಕ ಕೂಟೇಲಿನಲ್ಲಿ ಮಹಿಳೆಯೋರ್ವರು ರಬ್ಬರ್ ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ತೆರಳಿದ್ದ ವೇಳೆ ಕಾಡುಹಂದಿ ದಾಳಿ ಮಾಡಿ ತೀವ್ರ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಮಹಿಳೆ ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಪದ್ಮಾವತಿ. ಇವರು ಫೆ. 22 ರಂದು ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಪೊದೆಯಲ್ಲಿದ್ದ ಕಾಡುಹಂದಿ ಪದ್ಮಾವತಿ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಇನ್ನು ಈ ದಾಳಿಯಿಂದ ಪಾರಾಗಲು ಓಡಿದ ಪದ್ಮಾವತಿ ಅವರನ್ನು ಬೆನ್ನಟ್ಟಿದ ಕಾಡುಹಂದಿ ಮತ್ತೊಮ್ಮ ಕಚ್ಚಿ ತೀವ್ರ ಗಾಯಗೊಳಿಸಿತೆಂದು ತಿಳಿದುಬಂದಿದೆ. ವಿಷಯ ತಿಳಿದ ಇತರ ಟ್ಯಾಪರ್ ಗಳು ಕೆ.ಎಫ್.ಡಿ.ಸಿ. ಅಧಿಕಾರಿಗಳಿಗೆ ತಿಳಿಸಿದ ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ ಮತ್ತು ಊರವರು, ಬಂಧುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ರಬ್ಬರ್ ತೋಟದಲ್ಲಿ ಪೊದೆಗಳು ಹೆಚ್ಚಾಗಿ ಆಳೆತ್ತರಕ್ಕೆ ಬೆಳೆದಿದ್ದು ಇದರಲ್ಲಿ ಕಾಡು ಹಂದಿ ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ಅವಿತು ಕುಳಿತುಕೊಳ್ಳತ್ತಿದ್ದು, ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.