ಮಂಗಳೂರು; ಮೆಡಿಕಲ್ ಶಾಪ್ ಮಾಲೀಕನ ಮೇಲೆ ತಂಡವೊದು ಹಲ್ಲೆ ಮಾಡಿರುವ ಘಟನೆ ದೇರಳಕಟ್ಟೆಯ ಮೆಡಿಕಲ್ ಶಾಪ್ವೊಂದರಲ್ಲಿ ನಡೆದಿದೆ. ಮೆಡಿಕಲ್ ಶಾಪ್ ಮಾಲೀಕ ಅಬ್ದುಲ್ ಜಲೀಲ್ ಹಲ್ಲೆಗೊಳಗಾದವರು.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕನೊಬ್ಬ ಇತ್ತೀಚೆಗೆ ಮಂಗಳೂರಿನ ಬಂದರ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೈದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಅಬ್ದುಲ್ ಜಲೀಲ್ ವಾಟ್ಸ್ಆಯಪ್ನಲ್ಲಿ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದನ್ನು ಆಕ್ಷೇಪಿಸಿ ಮೃತ ಯುವಕನ ಕಡೆಯವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಯುವಕನ ಕಡೆಯವರು ಜಲೀಲ್ಗೆ ಕರೆ ಮಾಡಿ ತರಾಟೆಗೈದಿದ್ದಾರೆ. ಈ ವೇಳೆ ಅಬ್ದುಲ್ ಜಲೀಲ್ ಕ್ಷಮೆ ಯಾಚಿಸಿದ್ದರು ಎನ್ನಲಾಗಿದೆ. ಆದಾಗ್ಯೂ ಯುವಕನ ಕಡೆಯವರೆನ್ನಲಾದ 11 ಮಂದಿಯ ತಂಡ ಭಾನುವಾರ ಬೆಳಗ್ಗೆ ಮೂರು ಕಾರುಗಳಲ್ಲಿ ದೇರಳಕಟ್ಟೆಗೆ ಆಗಮಿಸಿ ಜಲೀಲ್ಗೆ ಹಲ್ಲೆಗೈದಿದ್ದಾರೆ. ಬಳಿಕ ಬಲವಂತವಾಗಿ ಕಾರಿನಲ್ಲಿ ಕರೆದಯೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ದಾರಿಮಧ್ಯೆ ಇನ್ನೊಂದು ಕಾರಿನಲ್ಲಿ ಕರೆದೊಯ್ದು ಅಲ್ಲೂ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿದ್ದಾರೆ. ಮುಜೀಬ್ ಎಂಬಾತ ಸೇರಿದಂತೆ ಏಳು ಮಂದಿ ಹಲ್ಲೆ ನಡೆಸಿದ್ದು, ತನ್ನ ಬಳಿಯಿದ್ದ 23,800 ರೂ. ನಗದು ಕಸಿದುಕೊಂಡಿದ್ದಾರೆ ಎಂದು ಜಲೀಲ್ ದೂರಿದ್ದಾರೆ.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.