ಕಡಬ: ಇಲ್ಲಿನ ಪಂಜದಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಯ ಬಳಿಯಿಂದ ಸಾಕು ನಾಯಿಗಳು ನಾಪತ್ತೆಯಾಗಿದ್ದು, ಅವುಗಳನ್ನು ಚಿರತೆಗಳು ಎಳೆದೊಯ್ದಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಸುದ್ದಿಯು ಕೋಡಿಂಬಾಳ ಬಳಿಯ ಪುಳಿಕುಕ್ಕು, ಪಂಜ, ನೇರಳ ಪರಿಸರದ ಜನರ ಆತಂಕಕ್ಕೆ ಕಾರಣವಾಗಿದೆ.
ಆ. 28 ರಂದು ರಾತ್ರಿ ವೇಳೆ ಗೂಡಿನಿಂದ ಹೊರ ಬಿಟ್ಟ ಪಂಜ ಬಳಿಯ ಕರುಂಬು ನೆಕ್ಕಿಲ ನಿವಾಸಿ ರಾಮಚಂದ್ರ ಭಟ್ ಅವರ 2 ಸಾಕುನಾಯಿಗಳು ತೋಟದತ್ತ ಹೋಗಿದ್ದು ಅನಂತರ ನಾಪತ್ತೆಯಾಗಿವೆ. ಅವರ ಪಕ್ಕದ ಮನೆಯ ಸಿಟೌಟ್ನಲ್ಲಿ ರಾತ್ರಿ ವೇಳೆ ಮಲಗಿದ್ದ ಸಾಕುನಾಯಿ ಕೂಡ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಸಿಟೌಟ್ನಲ್ಲಿ ನಾಯಿ ಮಲ ವಿಸರ್ಜಿಸಿದ್ದು, ಯಾವುದೋ ಪ್ರಾಣಿಯ ಜೊತೆ ಕಾದಾಡಿದ ರೀತಿಯಲ್ಲಿ ಕೆಸರು ಮತ್ತು ಹೆಜ್ಜೆ ಗುರುತುಗಳ ಕುರುಹುಗಳು ಕಂಡುಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಮರಿಗಳ ಜೊತೆ ಎರಡು ಚಿರತೆಗಳು ಬೊಳ್ಳಾಜೆ, ಪೊಳೆಂಜ, ನೆಕ್ಕಿಲ, ನೇರಳ ಮುಂತಾದ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಹರಡಿದ್ದು, ಕಾಣೆಯಾಗಿರುವ ನಾಯಿಗಳು ಚಿರತೆ ಪಾಲಾಗಿರಬಹುದು ಎನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ. ಇದೀಗ ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತಂತೆ ನಾಯಿಗಳನ್ನು ಚಿರತೆ ಹೊತ್ತೊಯ್ದಿದೆ ಎನ್ನುವ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.