ಬೆಳ್ತಂಗಡಿ: ಇಲ್ಲಿನ ಶಾಸಕ ಹರೀಶ್ ಪೂಂಜ ಅವರ ಸಮಯೋಚಿತ ನೆರವಿನಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಅವರ ಆಪ್ತ ಸಹಾಯಕ ಚರಿತ್ರ ಕುಮಾರ್ ಅವರ ಸಹಕಾರದಿಂದ ಮಗುವಿಗೆ ಲಿವರ್ ಸರ್ಜರಿ ನಡೆಸುವ ಮೂಲಕ ಬಾಲಕಿಯ ಚಿಕಿತ್ಸೆಗೆ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬೆಳ್ತಂಗಡಿ ತಾಲೂಕು ಗರ್ಡಾಡಿ ಸಮೀಪದ ನಂದಿಬೆಟ್ಟ ಎಂಬಲ್ಲಿಯ ಶಾರದಾ ಮತ್ತು ಬೇಬಿ ಪೂಜಾರಿ ದಂಪತಿಗಳ ಪುತ್ರಿ ಸಾನ್ವಿ ಅವರು ಲಿವರ್ ಸಮಸ್ಯೆಯಿಂದ ಅನಾರೋಗ್ಯ ಪೀಡಿತರಾಗಿ, ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಯೇ ಕೊನೆಯ ದಾರಿ ಎಂದು ವೈದ್ಯರು ಹೇಳಿದ್ದರು.
ಆದರೆ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವುದೆಂಬ ಮಾಹಿತಿ ತಿಳಿದು ಕುಟುಂಬದವರು ಕುಗ್ಗಿ ಹೋಗಿದ್ದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇವರಿಗೆ ನೆರವಾದರು. ಮನೆಯವರು ಮಾಹಿತಿ ನೀಡಿದ ಕ್ಷಣದಿಂದ ಕಾರ್ಯಪ್ರವೃತ್ತರಾದರು. ಬೆಂಗಳೂರಿನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಅವರ ಆಪ್ತ ಸಹಾಯಕ ಚರಿತ್ರ ಕುಮಾರ್ ಅವರ ಸಹಕಾರದಿಂದ ಮಗುವಿಗೆ ಲಿವರ್ ಸರ್ಜರಿ ನಡೆಸಲಾಯಿತು.
ಅತ್ಯಂತ ಕ್ಲಿಷ್ಟಕರ ಸರ್ಜರಿಯನ್ನು ಬೆಂಗಳೂರಿನ ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಡಾ. ಸಾದಿಕ್ ಸಿಕೋರ ಮತ್ತು ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿ ಮಗುವಿಗೆ ಪುನರ್ಜನ್ಮ ನೀಡಿದೆ.
ಶಾಸಕ ಹರೀಶ್ ಪೂಂಜಾ, ಅರವಿಂದ ಲಿಂಬಾವಳಿ ಮತ್ತು ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಲಕ್ಷಾಂತರ ಮೊತ್ತದ ಈ ಸರ್ಜರಿ ನಡೆದಿದ್ದು, ಎಲ್ಲರ ಸಹಕಾರದಿಂದ ಬೇಬಿ ಪೂಜಾರಿಯವರ ಮನೆಮಗಳು ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಈ ಮಗುವಿನ ಚಿಕಿತ್ಸೆಗಾಗಿ ಶ್ರಮಿಸಿದ ಹರೀಶ್ ಪೂಂಜ, ಅಮಿತ್, ಗುರುಪ್ರದ ಪೂಂಜ, ಚರಿತ್ರ ಅವರಿಗೆ ಬೇಬಿ ಪೂಜಾರಿಯವರು ಧನ್ಯವಾದ ತಿಳಿಸಿದ್ದಾರೆ.