ಹಾಸನ: ಗೋ ಮೂತ್ರ ಸೇರಿದಂತೆ ಗೋ ತ್ಯಾಜ್ಯಗಳ ಸದ್ಬಳಕೆ ಸಂಬಂಧ ಈಗಾಗಲೇ ಹಲವು ರಾಜ್ಯಗಳ ಪ್ರವಾಸ ಕೈಗೊಂಡು ಈ ಬಗ್ಗೆ ಅಧ್ಯಯನ ನಡೆಸಿದ್ದು, ಶೀಘ್ರವೇ ರಾಜ್ಯದಲ್ಲಿ ಹೊಸ ಪ್ರಯೋಗಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ ಚೌವ್ಹಾಣ್ ಹೇಳಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ‘ಕೇವಲ ಸರಕಾರವನ್ನು ಅವಲಂಬಿಸದೆ ಆತ್ಮ ನಿರ್ಬರ್ ಗೋ ಶಾಲೆಗಳು ಪ್ರಾರಂಭವಾಗಬೇಕು’ ಎಂದು ಸೂಚಿಸಿದರು.
ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ ನಡೆಯುತ್ತಿದೆ. ಜಿಲ್ಲೆಗಳ ವೈದ್ಯರ ಕೊರತೆ ನೀಗಿಸಲಾಗುವುದು. ಪಶು ವೈದ್ಯಕೀಯ ಸೇವೆಯಲ್ಲಿ ಗಣನೀಯ ಮತ್ತು ಗುಣಾತ್ಮಕ ಬದಲಾವಣೆಗೆ ಸರಕಾರ ಅದ್ಯತೆ ನೀಡಿದೆ. ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಾಗೂ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. ಗೋ ಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಅನಧಿಕೃತ ವಧಾಗೃಹಗಳನ್ನು ಮುಚ್ಚಬೇಕು. ಗೋವುಗಳ ಸಾಗಣೆ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ದೂರುಗಳು ಬಾರದಂತೆ ನಿಗಾ ವಹಿಸಿ’ ಎಂದು ನಿರ್ದೇಶನ ನೀಡಿದರು.
‘ಗ್ರಾಮ ಸಭೆಗಳಲ್ಲಿ ಇಲಾಖಾ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ. ಇದೇ ಮೊದಲ ಬಾರಿಗೆ ಪಶು ಸಹಾಯ ವಾಣಿ ಪ್ರಾರಂಭಿಸಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ, ಇಲಾಖಾ ಆಡಳಿತ ಸುಧಾರಣೆಗೂ ಆದ್ಯತೆ ನೀಡಲಾಗಿದೆ’ ಎಂದರು.
‘ಪಶು ವೈದ್ಯರು ರೈತರಿಗೆ ಲಭ್ಯವಾಗಬೇಕು, ಔಷಧಿಗಳ ಚೀಟಿ ಬರೆದು ಕೊಡದೆ ಸರಕಾರದಿಂದ ನೀಡುವ ಔಷಧಿಗಳನ್ನು ಉಚಿತವಾಗಿ ಒದಗಿಸಬೇಕು. ಸಹಾಯ ವಾಣಿಗೆ ಕರೆ ಬಂದಾಗ ಸಂಚಾರಿ ಚಿಕಿತ್ಸಾ ವಾಹನ ರೈತರ ಮನೆ ಬಾಗಿಲಿಗೆ ತಲುಪಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.