ಬೆಳ್ತಂಗಡಿ: ದಿಡುಪೆ-ಎಳನೀರು-ಸಂಸೆ ನಡುವೆ ರಸ್ತೆ ನಿರ್ಮಿಸುವ ಬಗ್ಗೆ ಸರ್ವೇ ಕಾರ್ಯ ನಡೆಸಲೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿಸಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನದ ಮೂಲಕ ಹಾದು ಹೋಗುವ ಈ ದಾರಿ ತಾಲೂಕಿನ ದಿಡುಪೆ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ.
ವನ್ಯಜೀವಿ ವಿಭಾಗವು ರಸ್ತೆ ಸರ್ವೇ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಪ್ರಸಾದ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದು,ಸ್ವಲ್ಪ ದಿನದಲ್ಲೇ ಸರ್ವೇ ಕಾರ್ಯದ ರೂಪುರೇಖೆ ಸಿದ್ಧವಾಗಲಿದೆ ಎದು ಹೇಳಲಾಗಿದೆ.
ದಿಡುಪೆ-ಸಂಸೆ ರಸ್ತೆಯು ಕೇವಲ 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶದಹೊಂದಿದ್ದು,ಜೊತೆಗೆ ಪರ್ಯಾಯ ಮಾರ್ಗ ಕೂಡ ಆಗಿದೆ. ಉಳಿದಂತೆ ಮಾಳ ಮತ್ತು ಚಾರ್ಮಾಡಿ ಘಾಟಿಗಳಲ್ಲಿ 20 ಕಿ.ಮೀ. ದೂರ ಕ್ರಮಿಸಬೇಕಿದೆ.
ಇನ್ನು ಈ ರಸ್ತೆ ನಿರ್ಮಾಣಕ್ಕೆ ದೊಡ್ಡ ದೊಡ್ಡ ಸೇತುವೆಗಳ ಅವಶ್ಯಕತೆ ಇಲ್ಲ ಬರೀ ಮೋರಿಗಳ ಆಗತ್ಯವಷ್ಟೇ ಇದೆ. ಬೇಕಾಬಿಟ್ಟಿಯಾಗಿ ಮರ ಕಡಿಯಲೂ ಅನುಮತಿಯಿಲ್ಲ ಎಂದು ಹೇಳಲಾಗಿದೆ. 4 ಕಿ.ಮೀ. ರಸ್ತೆಯಷ್ಟೇ ವನ್ಯಜೀವಿ ವಲಯಕ್ಕೆ ಸೇರಿದ್ದು, ಉಳಿದಂತೆ ಎಳನೀರು ಗಡಿಯಿಂದ ಹಲಸಿನಕಟ್ಟೆವರೆಗಿನ 3.30 ಕಿ.ಮೀ. ಕಂದಾಯ ಭೂಮಿಗೆ ಸೇರಿದ್ದಾಗಿದೆ.
ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ರಸ್ತೆಗೆ ಪರ್ಯಾಯ ರಸ್ತೆಯಾಗುವ ಜತೆಗೆ 4 ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡುಗಳನ್ನು ಬಹುಬೇಗ ಸೇರಲು ಅನಕೂಲವಾಗಲಿದೆ. ಇಲ್ಲವಾದಲ್ಲಿ 150 ಕಿ.ಮೀ. ಸುತ್ತುಬಳಸಿ ಚಾರ್ಮಾಡಿ ಅಥವಾ ಬಜಗೋಳಿಯಾಗಿ ಬಂದು ಹೊರನಾಡಿನಿಂದ ಶೃಂಗೇರಿಗೆ ತೆರಳಬೇಕಾಗಿದೆ. ನೂತನ ರಸ್ತೆಯಾದಲ್ಲಿ 100 ಕಿ.ಮೀ. ಉಳಿತಾಯವಾಗಲಿದೆ.
ಮತ್ತೂಂದೆಡೆ ಎಳನೀರು ಪ್ರದೇಶದಲ್ಲಿ 500ಕ್ಕೂ ಅಧಿಕ ಜನಸಂಖ್ಯೆಯಿದ್ದು, ಆರೋಗ್ಯ, ಶಿಕ್ಷಣ ಇತ್ಯಾದಿಗಳಿಗಾಗಿ ತಾಲೂಕು ಕೇಂದ್ರಕ್ಕೆ ತಲುಪಲು ಅವರ ಜೀವಮಾನದ ಸಂಪರ್ಕ ರಸ್ತೆ ಇದು ಎನಿಸಿಕೊಳ್ಳಲಿದೆ. ಇಲ್ಲವಾದಲ್ಲಿ ಅವರು ಬೆಳ್ತಂಗಡಿಗೆ ತಲುಪಲು ಬಸ್ನಲ್ಲಾದರೆ 100 ಕಿ.ಮೀ. ಸುತ್ತಬೇಕು. ಕಾಲ್ನಡಿಗೆಯಲ್ಲಾದರೆ 12 ಕಿ.ಮೀ. ಕ್ರಮಿಸುವ ಅನಿವಾರ್ಯ ಎಳನೀರು ನಿವಾಸಿಗಳದ್ದಾಗಿದೆ.