ಕಡಬ: ಇಲ್ಲಿನ ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿಯಲ್ಲಿ ಮನೆಯ ಅಂಗಳದಿಂದ ಅಡಿಕೆ ಕಳ್ಳತನ ಮಾಡಿದ ಆರೋಪಿಯನ್ನು 12 ಗಂಟೆಯಲ್ಲಿ ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ 23 ರಂದು ಆರೋಪಿ ಕಳ್ಳತನ ಮಾಡಿದ್ದ.
ಅಲೆಪ್ಪಾಡಿ ನಿವಾಸಿ ಸುಕೇಶ್ ಎಂಬವರು ಜೂನ್ 23 ರಂದು ಅಡಿಕೆ ಸುಲಿದು ಮಾರಾಟ ಮಾಡಲು ಮನೆಯ ಮೇಲೆ ಪ್ಲಾಸ್ಟಿಕ್ ಪಾಲಿಥೀನ್ ಚೀಲದಲ್ಲಿ ತುಂಬಿಸಿಟ್ಟಿದ್ದರು. ಇನ್ನು ಎರಡು ಗೋಣಿ ಚೀಲ ಅಡಿಕೆಯನ್ನು ಮನೆಯ ಅಂಗಳದಲ್ಲಿ ಇರಿಸಿದ್ದರು. ಬೆಳಗ್ಗೆ ಮನೆಯ ಪಕ್ಕದಲ್ಲಿಯೇ ಇರುವ ತೋಟಕ್ಕೆ ಹಸುವನ್ನು ಮೇಯಲು ಕಟ್ಟಿ ಹಾಕಲು ಹೋಗಿ ವಾಪಾಸ್ಸು ಮನೆ ಕಡೆಗೆ 10-30ರ ವೇಳೆಗೆ ಬರುತ್ತಿದ್ದಾಗ ಆರೋಪಿ ಹಳೆನೇರಂಕಿ ಗ್ರಾಮದ ಪರಮೇಶ್ವರ (27) ಎಂಬಾತ ಒಂದು ಚೀಲ ಅಡಿಕೆಯನ್ನು ತನ್ನ ಬೈಕ್ ನಲ್ಲಿ ಇಡೋದನ್ನು ನೋಡಿದ್ದಾರೆ. ಕೂಡಲೇ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಆತ ಅಡಿಕೆ ಸಮೇತ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.
ಇನ್ನು ಕಳವಾದ ಚೀಲದಲ್ಲಿ 8000 ರೂಪಾಯಿಯ 35 ಕೆ.ಜಿ ಅಡಿಕೆಯಿತ್ತು. ಕೂಡಲೇ ಸುಕೇಶ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ದೂರು ನೀಡಿದ ಕೇವಲ 12 ಗಂಟೆಯೊಳಗೆ ಪೊಲೀಸರು ಅಡಿಕೆ ಹಾಗೂ ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.