ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ 1.11,111ರೂ. ದೇಣಿಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂಲಕ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ದಿಗ್ವಿಜಯ್ ಚೆಕ್ ಮೂಲಕ ದೇಣಿಗೆ ನೀಡಿದ್ದಾರೆ. ಅಲ್ಲದೇ ಪ್ರಧಾನಿಗೆ ಬರೆದ ಪತ್ರದಲ್ಲಿ ದೇಣಿಗೆ ಸಂಗ್ರಹ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಜನವರಿ 15ರಿಂದ ವಿಶ್ವ ಹಿಂದೂ ಪರಿಷದ್ ರಾಮ ಮಂದಿರ ನಿರ್ಮಾಣಕ್ಕೆ 44 ದಿನಗಳ ದೇಣಿಗೆ ಸಂಗ್ರಹಣಾ ಅಭಿಯಾನ ಆರಂಭಿಸಿದ್ದು, ಅಭಿಯಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಬೇಕಾಗಿ ಪತ್ರದ ಮೂಲಕ ಕೇಳಿಕೊಂಡಿದ್ದಾರೆ.
ಧಾರ್ಮಿಕತೆ ಎನ್ನುವುದು ರಾಜಕೀಯಕ್ಕೆ ಬಳಸುವ ವಸ್ತುವಲ್ಲ. ಅದು ದೇವರು ಮತ್ತು ಮನುಷ್ಯ ನಡುವಿನ ನೇರ ಸಂಬಂಧ ಎಂಬ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ದಿಗ್ವಿಜಯ್ ಸಿಂಗ್, ದೇವಸ್ಥಾನ ಮತ್ತು ದೇವರ ಆಯ್ಕೆ ವೈಯಕ್ತಿಕವಾಗಿದ್ದು, ಹಿಂಸಾಚಾರದಿಂದ ದೇಣಿಗೆ ಸಂಗ್ರಹಕ್ಕೆ ಯಾರೂ ಮುಂದಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಕೋಲು, ಕತ್ತಿಗಳನ್ನು ಹಿಡಿದುಕೊಂಡು ಕೆಲವು ಸಂಘಟನೆಗಳು ದೇಣಿಗೆ ಸಂಗ್ರಹ ಕೆಲಸವನ್ನು ನಡೆಸುತ್ತಿವೆ. ಕೆಲವು ಧರ್ಮ, ಸಮುದಾಯಗಳ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಮಧ್ಯಪ್ರದೇಶದಲ್ಲಿ ಅಂಥ ಮೂರು ಘಟನೆಗಳು ನಡೆದಿವೆ. ಇತರ ಸ್ಥಳಗಳಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಯಾಗಿವೆ. ಇದು ಸಾಮಾಜಿಕ ಶಾಂತಿಗೆ ಧಕ್ಕೆ ತಂದಂತೆ” ಎಂದು ಹೇಳಿದ್ದಾರೆ.


