ಮುಂಬೈ: ಉತ್ತರ ಪ್ರದೇಶಕ್ಕೆ ಉಪ್ಪಿನಕಾಯಿಯನ್ನು ಕೊರಿಯರ್ ಮೂಲಕ ಕಳುಹಿಸೋದಕ್ಕೆ ಹೋಗಿ ಮುಂಬೈನ ತಾಡದೇವ್ ನಿವಾಸಿ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿಕೊಂಡ್ರು. ಕೊರಿಯರ್ ಸೇವೆ ಹೆಸರ್ರಲ್ಲಿ ಅವರನ್ನು ಕಾಡಿದ್ದು ಸೈಬರ್ ವಂಚಕರು.
ಮಹಿಳೆ ಖಾಸಗಿ ಕಂಪನಿಯಲ್ಲಿ ಅಕೌಂಟೆಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಪಕಸುಬಾಗಿ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿ ಸುತ್ತಮುತ್ತ ಮಾರಾಟ ಮಾಡುತ್ತಿದ್ದಾರೆ. ಪೊಲೀಸರಿಗೆ ಆ ಮಹಿಳೆ ನೀಡಿದ ದೂರಿನ ಪ್ರಕಾರ, ಇತ್ತೀಚೆಗೆ ಅವರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ ಉಪ್ಪಿನಕಾಯಿಗೆ ಆರ್ಡರ್ ಲಭಿಸಿತ್ತು. ಉಪ್ಪಿನಕಾಯಿ ಅಷ್ಟು ದೂರ ಕಳುಹಿಸಬೇಕಾದರೆ ಕೊರಿಯರ್ ಮಾಡಬೇಕಾಗುತ್ತದೆ ಎಂದು ಆನ್ಲೈನ್ನಲ್ಲಿ ಉತ್ತಮ ಕೊರಿಯರ್ ಸೇವೆಗೆ ಹುಡುಕಾಟ ನಡೆಸಿದ್ದಾರೆ.
ಒಂದು ಕೊರಿಯರ್ ಸೇವೆಯ ಫೋನ್ ನಂಬರ್ ನೋಟ್ ಮಾಡಿಕೊಂಡು ಅದಕ್ಕೆ ಕರೆಮಾಡಿದ್ದಾರೆ.
ಉಪ್ಪಿನ ಕಾಯಿ ಉತ್ತರ ಪ್ರದೇಶಕ್ಕೆ ಕಳುಹಿಸಬೇಕಾಗಿದೆ ಎಂದು ಹೇಳಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, 10 ರೂಪಾಯಿ ಪಾವತಿಸಿ ಆಯಪ್ ಡೌನ್ಲೋಡ್ ಮಾಡುವಂತೆ ಸೂಚಿಸಿದ್ದಾನೆ. ಡಿಸ್ಕೌಂಟ್ ಪಡೆಯೋದಕ್ಕೆ ಲೈಫ್ಟೈಮ್ ಮೆಂಬರ್ಶಿಪ್ ಪಡೆಯಬೇಕು ಎಂದು ಹೇಳಿದ್ದಾರೆ.
ಇದಾಗಿ ಮನೆಗೆ ಉಪ್ಪಿನಕಾಯಿ ಜಾರ್ ತೆಗೆದುಕೊಂಡು ಹೋಗಲು ಜನ ಬಂದಿದ್ದಾರೆ. ಅದನ್ನು ತೆಗೆದುಕೊಂಡು ಹೋದ ಸ್ವಲ್ಪ ಹೊತ್ತಿನಲ್ಲಿ ಅವರಿಗೆ ಆಯಪ್ನ ಲಿಂಕ್ ಕಳುಹಿಸಿದ್ದಾನೆ. ಅದನ್ನು ಡೌನ್ಲೋಡ್ ಮಾಡಿಕೊಂಡ ಮಹಿಳೆ 10 ರೂಪಾಯಿ ಪಾವತಿಸಲು ಹೋಗಿ ವಿಫಲರಾಗಿದ್ದಾರೆ.
ಆಗ ಕರೆ ಮಾಡಿದ ವ್ಯಕ್ತಿ, ಕೆಲ ಹೊತ್ತು ಲೈನ್ನಲ್ಲಿ ಇರುವಂತೆ ಹೇಳಿ ಮಹಿಳೆಯ ಮೂರು ಬ್ಯಾಂಕ್ ಖಾತೆಗಳಲ್ಲಿ ಇದ್ದ 81,000 ರೂಪಾಯಿಯನ್ನು ವರ್ಗಾವಣೆ ಮಾಡಿಕೊಂಡಿದ್ದ. ಹಣ ಕಡಿತವಾದ ಸಂದೇಶ ಬಂದ ಕೂಡಲೆ ವಂಚನೆಗೆ ಒಳಗಾಗಿರುವುದು ಮಹಿಳೆಗೆ ಮನವರಿಕೆಯಾಗಿದ್ದು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ.
ರಾಜಸ್ಥಾನದಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಈ ಸಂಬಂಧ ತಾಡದೇವ್ ಪೊಲೀಸರು ಮತ್ತು ಸೈಬರ್ ಪೊಲೀಸರು ಜಂಟಿಯಾಗಿ ತನಿಖೆ ಶುರುಮಾಡಿದ್ದಾರೆ.