ಬಂಟ್ವಾಳ: ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಕದಿರು ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕನ್ಯಾ ಸಂಕ್ರಮಣದ ಮರುದಿನ ನಡೆಯುವ ಉತ್ಸವದ ಅಂಗವಾಗಿ ಸರಪಾಡಿಯ ಹಲ್ಲಂಗಾಲು ಗದ್ದೆಯಿಂದ ಕದಿರು ತೆನೆಗಳನ್ನು ಸಂಗ್ರಹಿಸಲಾಯಿತು. ಅರ್ಚಕರು, ತಂತ್ರಿಗಳು ಹಾಗೂ ಕ್ಷೇತ್ರದ ಪ್ರಮುಖರು ವಾದ್ಯವೃಂದದೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ, ಮಾರ್ಗಮಧ್ಯದ ಏಳು ಕಟ್ಟೆಗಳಲ್ಲಿ ಸಂಪ್ರದಾಯಬದ್ಧ ಪೂಜೆ ಸಲ್ಲಿಸಿದರು. ಬಳಿಕ ಹಲ್ಲಂಗಾರು ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ಕದಿರು ತೆನೆಗಳನ್ನು ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಯಿತು.
ದೇವಸ್ಥಾನದಲ್ಲಿ ಲಕ್ಷ್ಮೀ ಪೂಜೆ ಬಳಿಕ ಕದಿರು ತೆನೆಗಳನ್ನು ದೇವರಿಗೆ ಸಮರ್ಪಿಸಿ, ದೇವಸ್ಥಾನದಲ್ಲಿ ತೆನೆ ಕಟ್ಟುವ ವಿಧಿ ನೆರವೇರಿಸಲಾಯಿತು. ಬಳಿಕ ಸರಪಾಡಿ ಹಾಗೂ ಮಣಿನಾಲ್ಕೂರು ಗ್ರಾಮಸ್ಥರು ಮನೆಮನೆಗೂ ಕದಿರು ಕೊಂಡೊಯ್ದು, ಹೊಸ ಅಕ್ಕಿಯಿಂದ ಅಡುಗೆ ತಯಾರಿಸಿ ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.


