ಮಂಗಳೂರು: ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಆದೇಶದ ಮೇರೆಗೆ ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯಲ್ಲಿರುವ ಮಂಗಳೂರು ತಾಲೂಕು ಹಾಗೂ ನಗರ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುವ ‘ಪುಷ್ಠಿ’, ಮಿಲ್ಲೆಟ್ ಲಡ್ಡು ಮಿಕ್ಸ್ ಸೇರಿದಂತೆ ವಿವಿಧ ಪೂರಕ ಆಹಾರಗಳ ತಯಾರಿಕಾ ಪ್ರಕ್ರಿಯೆಯನ್ನು ಪರಿಶೀಲಿಸಿದ ಡಾ. ಪ್ರವೀಣ್ ಕುಮಾರ್, ಆಹಾರ ಸುರಕ್ಷತಾ ಕಾಯ್ದೆ-2006ರಡಿ ಪಾಲಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ವೇಳೆ ಮಕ್ಕಳಿಗೆ ನೀಡಲಾಗುವ ‘ಪುಷ್ಠಿ’, ಮಿಲ್ಲೆಟ್ ಲಡ್ಡು ಪೌಡರ್ ಹಾಗೂ ಸಾಂಬಾರ್ ಪೌಡರ್ಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಪ್ರಯೋಗಾಲಯದ ವರದಿ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ತಯಾರಿಸಿದ ಆಹಾರವನ್ನು ಸೂಕ್ತ ಯಂತ್ರೋಪಕರಣಗಳ ಮೂಲಕ ಪ್ಯಾಕಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಉತ್ತಮ ಗುಣಮಟ್ಟದ ಫುಡ್ಗ್ರೇಡ್ ಪ್ಲಾಸ್ಟಿಕ್ ಬಳಸಿ ಆಹಾರ ಪ್ಯಾಕಿಂಗ್ ಮಾಡಬೇಕು. ಪ್ಯಾಕೆಟ್ಗಳಲ್ಲಿ ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ, ಬ್ಯಾಚ್ ನಂಬರ್ ಸೇರಿದಂತೆ ಅಗತ್ಯ ಲೇಬಲಿಂಗ್ ಮಾಹಿತಿಯನ್ನು ಸೂಕ್ತ ಯಂತ್ರೋಪಕರಣಗಳ ಮೂಲಕ ಸ್ಪಷ್ಟವಾಗಿ ಮುದ್ರಿಸುವಂತೆ ಸೂಚಿಸಲಾಯಿತು.


