ಮಂಗಳೂರು; ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ಕಣ್ಣೂರು ಗಾಣದಬೆಟ್ಟು ಜಂಕ್ಷನ್ನಲ್ಲಿ ಇಬ್ಬರು ರೌಡಿಶೀಟರ್ಗಳ ತಂಡಗಳು ಮಾರಕಾಯುಧ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಗ್ಯಾಂಗ್ ವಾರ್ ನಡೆಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 9ರ ರಾತ್ರಿ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಎರಡು ಕಾರುಗಳಲ್ಲಿ ಬಂದಿದ್ದ ‘ಡೀಲ್ ನೌಫಲ್’ ಪಡೆ ಹಾಗೂ ಮೃತ ರೌಡಿ ಟೊಪ್ಪಿ ನೌಫಲ್ನ ಸಹಚರ ಅನ್ಸಾರ್ ಪಡೆ ತಲವಾರುಗಳನ್ನು ಝಳಪಿಸುತ್ತಾ ಪರಸ್ಪರ ಕೊಲೆಗೆ ಯತ್ನಿಸಿವೆ. ಸಾರ್ವಜನಿಕರಿಗೂ ಜೀವ ಬೆದರಿಕೆ ಒಡ್ಡಿದ್ದರಿಂದ ಸ್ಥಳೀಯರು ಭಯಗೊಂಡು ದೂರು ನೀಡಲು ಹಿಂಜರಿದಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಪಿಎಸ್ಐ ಶಿವಕುಮಾರ್ ಮತ್ತು ಸಿಬ್ಬಂದಿ, ಶಾಂತಿ ಭಂಗ ಹಾಗೂ ಬೆದರಿಕೆ ಒಡ್ಡಿದ ಆರೋಪದಡಿ ಎರಡೂ ಗ್ಯಾಂಗ್ನ ರೌಡಿಗಳ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ತನಿಖೆ ಚುರುಕುಗೊಳಿಸಿದ್ದಾರೆ.


