ಮಂಜೇಶ್ವರ: ಗಾಂಜಾ ಸೇವಿಸಿದ್ದ ಯುವಕೋನೋರ್ವ ಅತೀ ವೇಗದಿಂದ ಕಾರು ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಬಳಿಯ ಬೇಕೂರಿನಲ್ಲಿ ನಡೆದಿದೆ.
ಬೇಕೂರು ಬೊಳ್ಳಾರಿನ ಕೆ.ರಾಮ ಭಟ್ (62) ಮೃತಪಟ್ಟ ದುರ್ದೈವಿ.
ಕಾರು ಚಾಲಕ ಗಾಂಜಾ ಸೇವನೆ ಮಾಡಿ ಅಜಾಗರೂಕತೆಯಿಂದ ಮತ್ತು ಅತೀ ವೇಗದಿಂದ ಕಾರು ಚಲಾಯಿಸುತ್ತಿದ್ದ. ಈ ಸಮಯದಲ್ಲೇ ಆ ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರ ಬೊಳ್ಳಾರಿನ ಕೆ.ರಾಮ ಭಟ್ ಗೆ ಕಾರು ಗುದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ . ಅಪಘಾತ ನಡೆದ ಸಂದರ್ಭದಲ್ಲೇ ಈ ದಾರಿಯಾಗಿ ಪೊಲೀಸ್ ಜೀಪು ಬರುವುದನ್ನು ಗಮನಿಸಿದ ಕಾರು ಚಾಲಕ ಕಾರು ಬಿಟ್ಟು ಸಮೀಪದ ನಿರ್ಜನ ಸ್ಥಳದ ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಪಘಾತ ಕ್ಕಿಂತ ಮೊದಲು ಈತ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದನು. ನಾಗರಿಕರು ಈತನನ್ನು ಹಿಡಿಯಲು ಪ್ರಯತ್ನಿಸಿದಾಗ ಕಾರು ಸಹಿತ ಅತೀ ವೇಗದಲ್ಲಿ ಪರಾರಿಯಾಗಲೆತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.