ಕೇಂದ್ರ ಸರ್ಕಾರದ ಪಿಎಂ ಬಸ್ ಸೇವಾ ಯೋಜನೆಯಡಿ ಮಂಗಳೂರು ಕೆಎಸ್ಆರ್ಟಿಸಿ ವಿಭಾಗಕ್ಕೆ 100 ಹೊಸ ಎಲೆಕ್ಟ್ರಿಕ್ ಬಸ್ಗಳು ಮಂಜೂರಾಗಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಷ್ಟೇ ಅಲ್ಲದೆ ಉಡುಪಿ, ಮೂಡುಬಿದಿರೆ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇವುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಯೋಜನೆಯಡಿ ಸ್ಟೇಟ್ಬ್ಯಾಂಕ್ನಿಂದ ಸುರತ್ಕಲ್, ಮೂಲ್ಕಿ ಮತ್ತು ಪಡುಬಿದ್ರಿ ಮಾರ್ಗವಾಗಿ ಉಡುಪಿಗೆ 10 ಬಸ್ಗಳು ಹಾಗೂ ವಾಮಂಜೂರು, ಗುರುಪುರ, ಕೈಕಂಬ ಮಾರ್ಗವಾಗಿ ಮೂಡುಬಿದಿರೆಗೆ 10 ಬಸ್ಗಳು ಸಂಚರಿಸಲಿವೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪಡೀಲ್ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ 4 ಬಸ್ಗಳನ್ನು ಮತ್ತು ಹಿಂದೆ ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣದ ರೂಟ್ಗೆ ಮತ್ತೆ 2 ಬಸ್ಗಳನ್ನು ನಿಯೋಜಿಸಲಾಗುತ್ತಿದೆ.
ಈ ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆಗಾಗಿ ಮಂಗಳೂರಿನ ಕುಂಟಿಕಾನ ಮತ್ತು ಬಾಳೆಪುಣಿಯಲ್ಲಿ ಡಿಪೋಗಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಡಿಪೋದಲ್ಲಿ 50 ಬಸ್ಗಳ ನಿಲುಗಡೆ ಹಾಗೂ ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಶೀಘ್ರದಲ್ಲೇ ಅಂತಿಮಗೊಳ್ಳಲಿದೆ.


