ಬೆಳ್ತಂಗಡಿ: ಬಂದಾರು ಗ್ರಾಮದ ಇಂಡಸ್ ಮೊಬೈಲ್ ಟವರ್ನಿಂದ ಸುಮಾರು 60 ಲೀಟರ್ ಡೀಸೆಲ್ ಕಳವು ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 24 ರಂದು ಪ್ರಕರಣ ದಾಖಲಾಗಿದೆ.
ಇಂಡಸ್ ಮೊಬೈಲ್ ಟವರ್ ಕಂಪನಿಯಲ್ಲಿ ಸೆಕ್ಯುರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಕೆ(53) ಅವರು ನೀಡಿದ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 303(2)ರ ಅಡಿಯಲ್ಲಿ ಧೀಕ್ಷಣ್ ಹಾಗೂ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ದೂರುದಾರರ ಪ್ರಕಾರ, ಆಗಸ್ಟ್ 23ರಂದು ರಾತ್ರಿ ಸುಮಾರು 2 ಗಂಟೆಗೆ ಬಂದಾರು ಗ್ರಾಮದ ಟವರ್ ಬಳಿ ತಾಂತ್ರಿಕ ಸಿಬ್ಬಂದಿ ದೀಕ್ಷಿತ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ರಸ್ತೆಯ ಬಳಿ ನಿಲ್ಲಿಸಿದ್ದ KA-20-D-7442 ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಎರಡು ಕ್ಯಾನ್ಗಳಲ್ಲಿ ಡೀಸೆಲ್ ತುಂಬಿಸುತ್ತಿರುವುದು ಕಂಡುಬಂದಿದೆ. ಟಾರ್ಚ್ ಬೆಳಕಿನಲ್ಲಿ ಅವರನ್ನು ಗಮನಿಸಿ ಕಾರಿನ ಬಳಿ ತೆರಳುತ್ತಿದ್ದಂತೆ, ಮೂವರು ಡೀಸೆಲ್ ಕ್ಯಾನ್ಗಳ ಸಮೇತ ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪರಾರಿಯಾದವರಲ್ಲಿ ಇದೇ ಟವರ್ನಲ್ಲಿ ಈ ಹಿಂದೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದ ಧೀಕ್ಷಣ್ ಎಂಬಾತನನ್ನು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳವಾಗಿರುವ ಸುಮಾರು 60 ಲೀಟರ್ ಡೀಸೆಲ್ನ ಮೌಲ್ಯ ಸುಮಾರು 6 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.


