ಬೆಳ್ತಂಗಡಿ : ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಗುರಿಪಳ್ಳ ನಿವಾಸಿ ಶ್ರೀಧರ ನಾಯ್ಕ ಎಂಬವರ ಮನೆಯಲ್ಲಿ ಹಗಲು ಹೊತ್ತು ಯಾರು ಇಲ್ಲದ ಸಮಯದಲ್ಲಿ ಬೆಳಗ್ಗೆ 9:30 ರಿಂದ ಸಂಜೆ 5:30 ಮಧ್ಯೆ ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜೂ.20 ರಂದು ನಡೆದಿದೆ.
ಮನೆಯಲ್ಲಿ ಒಟ್ಟು ನಾಲ್ಕು ಮಂದಿ ಇದ್ದು ಶ್ರೀಧರ ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.ಇತರರು ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಹಂಚು ತೆಗೆದು ಒಳನುಗ್ಗಿದ್ದು ಮನೆಯಲ್ಲಿ ಇದ್ದ ಕಪಾಟಿನ ಬೀಗ ಮುರಿದು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.
ಚಾವಣಿಯ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಬಳಿಕ ಹಂಚನ್ನು ಹಾಗೆ ಇಟ್ಟು ಹಿಂಭಾಗಲಿನ ಮೂಲಕ ಪರಾರಿಯಾಗಿದ್ದಾರೆ. ಶ್ರೀಧರ ಅವರ ಮನೆ ಉಜಿರೆ-ಗುರಿಪಳ್ಳ ರಸ್ತೆಯ ಬದಿಯಲ್ಲೇ ಇದ್ದು ಇಲ್ಲಿ ಜನ- ವಾಹನ ಓಡಾಟವಿದ್ದರೂ ಹಾಡುಹಗಲೇ ಕಳ್ಳತನ ನಡೆದಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್, ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್, ಎಎಸ್ಐ ನಾರಾಯಣ ಮತ್ತು ತಂಡ ಹಾಗೂ ಮಂಗಳೂರಿನಿಂದ ಶ್ವಾನದಳ, ಬೆರಳಚ್ಚು ತಜ್ಞರು ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜಯಶ್ರೀ ನೀಡಿದ ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.


