ಮಂಗಳೂರಿನ ‘ರಂಗ ಚಂದಿರ (ರಿ)’ ವತಿಯಿಂದ ಹಿರಿಯ ಸಾಹಿತಿ ಹಾಗೂ ನಾಟಕಕಾರ ಡಾ. ಡಿ.ಕೆ. ಚೌಟ (88) ಅವರ ನೆನಪಿನಲ್ಲಿ ʼಮಿತ್ತಬೈಲ್ ಯಮುನಕ್ಕʼ ನಾಟಕ ಪ್ರದರ್ಶನವು ಜೂನ್ 1ರಂದು ಸಂಜೆ 5:30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.
ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಚಿಂತಕರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಪ್ರಮುಖ ಚಿಂತಕ ಪ್ರೊ. ಕೆ.ಈ. ರಾಧಾಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಮತ್ತು ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅವರು ಭಾಗವಹಿಸಲಿದ್ದು, ರಂಗಚಂದಿರ ಸಂಸ್ಥೆಯ ಗೌರವಾಧ್ಯಕ್ಷರಾದ ರಾಧಾಕೃಷ್ಣ ಹೆಗಡೆ ಅವರು ಉಪಸ್ಥಿತರಿರಲಿದ್ದಾರೆ. ಇದೇ ಸುಸಂದರ್ಭದಲ್ಲಿ ಕಲಾ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಿರಿಯ ರಂಗ ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರು ಹಾಗೂ ಸುರೇಶ ಆನಗಳ್ಳಿ, ಹಿರಿಯ ಸಾಹಿತಿ ಮುಹಮ್ಮದ್ ಕುಳಾಯಿ, ರಂಗ ಸಂಘಟಕ ಪ್ರಿಯ ಎಸ್.ಕೆ.ಸಿಂಗ್ ಮತ್ತು ಹಿರಿಯ ಪತ್ರಕರ್ತ ಕೆ. ಶಿವಸುಬ್ರಮಣ್ಯ ಅವರಿಗೆ ಆತ್ಮೀಯವಾಗಿ ‘ರಂಗ ಗೌರವ’ ಸಮರ್ಪಿಸಿ ಸನ್ಮಾನಿಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.


